ದಾವಣಗೆರೆ: ಪೋಷಣ್ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 100 ಗರ್ಭಿಣಿಯರಿಗೆ ಸಾಮೂಹಿಕವಾಗಿ ಸೀಮಂತ ನೆರವೇರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಹಾಗೂ ಸಿಇಒ ಪದ್ಮ ಬಸವಂತಪ್ಪ ಉಡಿ ತುಂಬುವ ಮೂಲಕ ಸೀಮಂತ ಶಾಸ್ತ್ರವನ್ನು ನೆರವೇರಿಸಿದರು. ಗರ್ಭಿಣಿಯರ ಕೈಗಳಿಗೆ ಹಸಿರು ಗಾಜಿನ ಬಳೆ ತೊಡಿಸಿ, ಹೂವು ಮುಡಿಸಿ ಅರಿಶಿನ, ಕುಂಕುಮ ಇಟ್ಟು ಆರತಿ ಎತ್ತಿದರು.
ತಟ್ಟೆಯಲ್ಲಿ ಸೀರೆ, ಹಣ್ಣು, ಗಾಜಿನ ಬಳೆ,ಎಲೆ, ಅಡಿಕೆಯನ್ನು ನೀಡಿ, ಉಡಿ ತುಂಬಿಸಲಾಯಿತು. ತುಂಬು ಗರ್ಭಿಣಿಯರಿಗೆ ತವರು ಮನೆಯಂತೆ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನೆರವೇರಿಸಿದರು.
‘ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಗರ್ಭಿಣಿಯರು ಸೀಮಂತದ ಕಾರ್ಯ ನೆರವರಿದ ಬಳಿಕ ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಡ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಖುಷಿ ತಂದಿದೆ’ ಎಂದು ಗರ್ಭಿಣಿಯೊಬ್ಬರು ತಿಳಿಸಿದರು.
50 ಮಕ್ಕಳಿಗೆ ಅನ್ನಪ್ರಾಶನ: ಕಾರ್ಯಕ್ರಮದಲ್ಲಿ 6 ತಿಂಗಳು ತುಂಬಿದ ಮಕ್ಕಳಿಗೆ ಪ್ರಥಮವಾಗಿ ಅನ್ನವನ್ನು ತಿನ್ನಿಸಲಾಯಿತು.
ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಘವೇಂದ್ರ ಆಚಾರ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಟಿ.ವಿ. ರಾಜು ಕಾರ್ಯಕ್ರಮದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.