ದಾವಣಗೆರೆ: ಮೀಸಲಾತಿ ಪ್ರಮಾಣವನ್ನು ಶೇ 7.5ರಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿ ‘ರಾಜಧಾನಿಯಿಂದ ರಾಜನಹಳ್ಳಿವರೆಗೆ’ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಗೆ ಭಾರಿ ಜನ ಬೆಂಬಲ ವ್ಯಕ್ತವಾಯಿತು.
ಬಳ್ಳಾರಿ, ಹಾವೇರಿ, ದಾವಣಗರೆ, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಮಾಜದ ಮುಖಂಡರು ಮೀಸಲಾತಿಗಾಗಿ ಒಕ್ಕೊರಲಿನಿಂದ ಆಗ್ರಹಿಸಿದರು.
‘ಮೀಸಲಾತಿ ಭಿಕ್ಷೆಯಲ್ಲ, ‘ಸಂವಿಧಾನದ ಹಕ್ಕು’, ‘ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಆಗ್ರಹ’ ‘ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ’ ‘ಜಾತಿ ಪದ್ಧತಿ ಇರುವವರೆಗೂ ಮೀಸಲಾತಿ ಬೇಕು’, ‘ಯಾವುದೇ ಜಾತಿಯ ವಿರುದ್ಧ ನಮ್ಮ ಹೋರಾಟವಲ್ಲ’ ಎಂಬ ನಾಮಫಲಕಗಳು ರಾರಾಜಿಸಿದವು.
ಮಠದ ಆವರಣದಲ್ಲಿರುವ ಪುಣ್ಯಾನಂದಪುರಿ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸುವ ಪ್ರಸನ್ನಾನಂದಪುರಿ ಸ್ವಾಮೀಜಿ ನಂತರ ಮಠದ ದ್ವಾರದಲ್ಲಿ ಟೇಪ್ ಕತ್ತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಕೇಂದ್ರದಿಂದ ಸಿಗುವ ಮೀಸಲಾತಿ ಸಿಕ್ಕಿದ್ದು, ರಾಜ್ಯ ಸರ್ಕಾರ ಶೇ 7.5ರಷ್ಟು ಮೀಸಲಾತಿ ನೀಡಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಈಗಾಗಲೇ ಮನವಿ ಸಲ್ಲಿಸಿದ್ದು, ಮುಂದಿನ ಹಂತವಾಗಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
‘16 ದಿವಸ ನಡೆಯುವ ಈ ಪಾದಯಾತ್ರೆ ಜೂನ್ 24ರಂದು ಬೆಂಗಳೂರಿಗೆ ತಲುಪಲಿದೆ. 25ರಂದು ವಿಧಾನಸೌಧದ ಬಳಿ ಇರುವ ವಾಲ್ಮೀಕಿ ಪ್ರತಿಭಟನೆಗೆ ಮಾಲಾರ್ಪಣೆ ಮಾಡಿ ಫ್ರೀಡಂ ಪಾರ್ಕ್ನಲ್ಲಿ ಚಳವಳಿ ನಡೆಸಲಾಗುವುದು. ನಮ್ಮ ಬೇಡಿಕೆಗಳಿ ಸ್ಪಂದಿಸಿದರೆ ಒಳ್ಳೆಯದು ಇಲ್ಲದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ’ ಎಂದು ಹೇಳಿದರು.
ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಮಾತನಾಡಿ, ‘ಮೀಸಲಾತಿ ಹೆಚ್ಚಳಕ್ಕೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮ್ಮಿಶ್ರ ಸರ್ಕಾರದಿಂದ ಪರಿಶಿಷ್ಟ ಪಂಗಡದ ಮೀಸಲಾತಿ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದ್ದು, ಮೀಸಲಾತಿ ಸಿಗುವ ತನಕ ಹೋರಾಟ ನಡೆಸುತ್ತೇವೆ. ಸಮಾಜದ ಹೋರಾಟದಲ್ಲಿ ಜಯಶೀಲರಾಗುವುದು’ ನಮ್ಮ ಗುರಿ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.