ADVERTISEMENT

ಆಕರ್ಷಕ ದರದ ಆಮೀಷವೊಡ್ಡಿ ಅರ್ಧದಲ್ಲಿ ಕೈಕೊಟ್ಟ ಟೂರಿಸ್ಟ್‌ ಕಂಪನಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 4:14 IST
Last Updated 7 ಜುಲೈ 2019, 4:14 IST
ಬಾಗಿಲು ಹಾಕಿಕೊಂಡಿರುವ ಮಲೇಬೆನ್ನೂರಿನ ಹನೀಫ್‌ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಕಂಪನಿ ಕಚೇರಿ
ಬಾಗಿಲು ಹಾಕಿಕೊಂಡಿರುವ ಮಲೇಬೆನ್ನೂರಿನ ಹನೀಫ್‌ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಕಂಪನಿ ಕಚೇರಿ   

ದಾವಣಗೆರೆ: ಕಡಿಮೆ ದರದಲ್ಲಿ ಉಮ್ರಾ ಯಾತ್ರೆ (ಹಜ್‌) ಮಾಡಿಸುವುದಾಗಿ ಕರೆದುಕೊಂಡು ಹೋಗಿರುವ ಟೂರಿಸ್ಟ್‌ ಕಂಪನಿ ಮದೀನಾದಿಂದ ವಾಪಸ್‌ ಕರೆದುಕೊಂಡು ಬರದಿರುವುದರಿಂದ ಜಿಲ್ಲೆಯ 83 ಯಾತ್ರಿಗಳು ಊರಿಗೆ ಮರಳಿ ಬರಲಾಗದೇ ಪರದಾಡುತ್ತಿದ್ದಾರೆ.

ಮಲೇಬೆನ್ನೂರಿನ ಖಾರಿ ತನ್ವೀರ್‌ ಎಂಬಾತನ ಹನೀಫ್‌ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಕಂಪನಿ ಈ ರೀತಿ ಮೋಸ ಮಾಡಿದೆ.

ನಾಲ್ಕು ತಿಂಗಳ ಹಿಂದೆ ಈ ಕಂಪನಿ ಆರಂಭಗೊಂಡಿತ್ತು. ಕೇವಲ ₹ 35 ಸಾವಿರಕ್ಕೆ 15 ದಿನಗಳ ಉಮ್ರಾ ಯಾತ್ರೆಗೆ ಕರೆದುಕೊಂಡು ಹೋಗಲಾಗುವುದು ಎಂದು ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದರು. ಉಮ್ರಾ ಯಾತ್ರೆಗೆ ₹ 55 ಸಾವಿರದಿಂದ ₹ 60 ಸಾವಿರ ವೆಚ್ಚವಾಗುತ್ತಿತ್ತು. ಇಷ್ಟು ಕಡಿಮೆ ಹಣಕ್ಕೆ ಯಾತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂಬುದನ್ನು ಹಲವರು ಮೊದಲು ನಂಬಿರಲಿಲ್ಲ. ಆರಂಭದಲ್ಲಿ ಹೆಸರು ನೋಂದಾಯಿಸಿದವರನ್ನು ಕರೆದುಕೊಂಡು ಹೋಗಿ ಕರೆತಂದಿದ್ದರು. ಹನೀಫ್‌ ಟೂರ್‌ ಆ್ಯಂಡ್‌ ಟ್ರಾವೆಲ್‌ ಕಂಪನಿಯು ಬೆಂಗಳೂರು ಜಯನಗರ ಬೈತುಲ್‌ ಹರಮ್‌ ಇಂಟರ್‌ನ್ಯಾಷನಲ್‌ ಟೂರ್‌ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ಆ ಕಂಪನಿಯೇ ಯಾತ್ರೆಯ ನಿರ್ವಹಣೆ ಮಾಡುತ್ತಿತ್ತು.

ADVERTISEMENT

ಎರಡು ಬಾರಿ ಯಾತ್ರಿಗಳನ್ನು ಕರೆದುಕೊಂಡು ಹೋಗಿ ಬಂದಿದ್ದರಿಂದ ಸುಮಾರು 300 ಮಂದಿ ಮತ್ತೆ ಉಮ್ರಾ ಯಾತ್ರೆಗಾಗಿ ₹ 35 ಸಾವಿರ ನೀಡಿ ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 20 ಮಹಿಳೆಯರೂ ಸೇರಿ 83 ಮಂದಿಯನ್ನು ಜೂನ್ 20ರಂದು ಕರೆದುಕೊಂಡು ಹೋಗಲಾಗಿತ್ತು. ಮೆಕ್ಕಾಕ್ಕೆ ಹೋಗಿ, ಅಲ್ಲಿಂದ ಮದೀನಾಕ್ಕೆ ಬಂದು ಜುಲೈ 2ರಂದು ಈ ತಂಡ ಭಾರತಕ್ಕೆ ಹೊರಡಬೇಕಿತ್ತು. ಆದರೆ, ಕಂಪನಿಯವರು ಯಾತ್ರಿಗಳಿಗೆ ಮೆಕ್ಕಾ ತೋರಿಸಿ, ಮದೀನಾಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.

ಬೈತುಲ್‌ ಹರಮ್‌ ಇಂಟರ್‌ನ್ಯಾಷನಲ್‌ ಟೂರ್‌ ಸಂಸ್ಥೆಗೆ ಕರೆ ಮಾಡಿದರೆ ಕರೆದುಕೊಂಡು ಹೋಗುವುದಷ್ಟೇ ತಮ್ಮಲ್ಲಿ ಬುಕ್‌ ಆಗಿದೆ ಎಂದು ಅವರು ಕೈಚೆಲ್ಲಿದ್ದಾರೆ. ಈ ತಂಡದ ಜತೆಗೆ ಇದ್ದ ಖಾರಿ ತನ್ವೀರ್‌ ವ್ಯವಸ್ಥೆ ಸರಿಪಡಿಸುವುದಾಗಿ ಹೇಳಿ ಅಲ್ಲಿಂದ ಒಬ್ಬನೇ ವಾಪಸ್ಸಾಗಿದ್ದಾನೆ. ಈಗ ಆತನ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ.

ಈ ಬಗ್ಗೆ ವಿಡಿಯೊ ಮಾಡಿ ತಮ್ಮ ಸಂಬಂಧಿಕರಿಗೆ ಯಾತ್ರಿಗಳು ಕಳುಹಿಸಿದ್ದಾರೆ. ‘ಮೆಕ್ಕಾದಲ್ಲಿ ಹೋಟೆಲ್‌ನಿಂದಲೂ ಹೊರಗೆ ಹಾಕಿದ್ದರಿಂದ ಬೀದಿಗೆ ಬಿದ್ದಿದ್ದೇವೆ. ನಮ್ಮಲ್ಲಿ ದುಡ್ಡಿಲ್ಲ, ಊಟಕ್ಕೂ ಸಮಸ್ಯೆಯಾಗಿದೆ. ರಿಟರ್ನ್‌ ಟಿಕೆಟ್‌ ಇಲ್ಲ. ಸರ್ಕಾರ ಸಹಾಯ ಮಾಡಬೇಕು’ ಎಂದು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ ಎಂದು ಮಲೇಬೆನ್ನೂರಿನ ಅಬಿದ್‌ ಅಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

***

ಕಡಿಮೆ ದರದಲ್ಲಿ ಉಮ್ರಾಯಾತ್ರೆ ಮಾಡಿಸುವುದಾಗಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಖಾರಿ ತನ್ವೀರ್‌ ಮೋಸ ಮಾಡಿದ್ದಾನೆ. ಯಾತ್ರೆಗೆ ಹೋದವರನ್ನು ಕರೆ ತರಬೇಕು. ಉಳಿದವರಿಗೆ ಹಣ ವಾಪಸ್‌ ನೀಡಬೇಕು.
-ಅಬಿದ್‌ ಅಲಿ, ಯಾತ್ರಿಯ ಸಂಬಂಧಿ, ಮಲೇಬೆನ್ನೂರು

ಸೌದಿ ಅರೇಬಿಯಾದಲ್ಲಿರುವ ಹಜ್‌ ಸಮಿತಿ, ಭಾರತದ ರಾಯಭಾರಿ ಕಚೇರಿಯು ಪ್ರಯತ್ನ ಪಡುತ್ತಿದೆ. ಅದು ಯಶಸ್ವಿಯಾದರೆ ಒಂದೆರಡು ದಿನಗಳಲ್ಲಿ ಎಲ್ಲರೂ ವಾಪಸ್ಸಾಗಲಿದ್ದಾರೆ.
-ಶಬ್ಬೀರ್‌ ಮಲೇಬೆನ್ನೂರು, ಯಾತ್ರಿಯ ಸಂಬಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.