ADVERTISEMENT

ಚುನಾವಣೆ ಎದುರಿಸಿದರೆ ಠೇವಣಿ ಸಿಗದು: ಯತ್ನಾಳಗೆ ಕುಟುಕಿದ ಎಂ.ಪಿ.ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 12:26 IST
Last Updated 8 ಏಪ್ರಿಲ್ 2025, 12:26 IST
   

ದಾವಣಗೆರೆ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿದರೆ ಠೇವಣಿ ಕೂಡ ಸಿಗುವುದಿಲ್ಲ. ಆದರೂ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕುಟುಕಿದರು.

‘ತಮ್ಮ ರಕ್ಷಣೆಗೆ ಹಿಂದುತ್ವವನ್ನು ಗುರಾಣಿಯ ರೀತಿಯಲ್ಲಿ ಬಳಸುತ್ತಿದ್ದಾರೆ. ‘ಹಿಂದುತ್ವದ ಹುಲಿ’ ಎಂಬುದಾಗಿ ಘೋಷಣೆ ಮಾಡಿಕೊಂಡಿರುವ ಯತ್ನಾಳ, ನಕಲಿ ಹಿಂದೂ ನಾಯಕ. ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಾತನಾಡಿ ದೊಡ್ಡವರಾಗಲು ಯತ್ನಿಸುತ್ತಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

‘ಸಾಮಾಜಿಕ ಮಾಧ್ಯಮ ಬಳಸಿಕೊಂಡು ಯಡಿಯೂರಪ್ಪ ಕುಟುಂಬದ ವಿರುದ್ಧ ತೇಜೋವಧೆ ಮಾಡಲಾಗುತ್ತಿದೆ. ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ಅವರ ಜಪ ಮಾಡುತ್ತಿದ್ದಾರೆ. ಯತ್ನಾಳ ನಿಂದನೆಯಿಂದ ಯಡಿಯೂರಪ್ಪ ಅವರ ಗೌರವ ಕಡಿಮೆ ಆಗುವುದಿಲ್ಲ’ ಎಂದರು.

ADVERTISEMENT

‘ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ಸಮುದಾಯದ ಗುರುಗಳು ಹೀಗೆ ವ್ಯಕ್ತಿ‍ಪರ ಮಾತನಾಡುವುದು ಸರಿಯಲ್ಲ. ಸಹಾಯ ಮಾಡಿದ ಎಲ್ಲರನ್ನೂ ಯತ್ನಾಳ ಬಾಯಿಗೆ ಬಂದಂತೆ ನಿಂದಿಸಿದ್ದಾರೆ. ಈ ವ್ಯಕ್ತಿ ಮುಂದೆ ಗುರುಗಳನ್ನೂ ಬಿಡುವುದಿಲ್ಲ’ ಎಂದು ಹೇಳಿದರು.

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ್, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೆಬಾಳು, ಎಸ್.ಎಂ.ರೇವಣಸಿದ್ದಪ್ಪ, ಗದಿಗೆಪ್ಪ, ರಾಜು ವೀರಣ್ಣ, ಚಂದ್ರು ಪಾಟೀಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.