ADVERTISEMENT

ದಾವಣಗೆರೆ | ಪತ್ನಿಯ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ

2016ರಲ್ಲಿ ನಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 12:32 IST
Last Updated 16 ಅಕ್ಟೋಬರ್ 2020, 12:32 IST

ದಾವಣಗೆರೆ: ಇಲ್ಲಿನ ಕೆ.ಟಿ.ಜೆ. ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ವೀಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಶಂಕರನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹ 1,05, 500 ದಂಡ ವಿಧಿಸಿದೆ.

ಕೆ.ಟಿ.ಜೆ. ನಗರದ 1ನೇ ಮೇನ್‌ 12 ಕ್ರಾಸ್‌ ನಿವಾಸಿ ಶಂಕರ ಪತ್ನಿ ವೀಣಾ (28) ಅವರ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದ. 2016ರ ನವೆಂಬರ್‌ 5ರಂದು ರಾತ್ರಿ ಇದೇ ವಿಷಯಕ್ಕೆ ಪತ್ನಿಯೊಂದಿಗೆ ಜಗಳ ತೆಗೆದು ಈಳಿಗೆ ಮಣೆ, ಟಿಪಾಯಿ, ಮಿಕ್ಸರ್‌ ಗ್ರೈಂಡರ್‌ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದ. ವೀಣಾರ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದ. ತಡೆಯಲು ಬಂದ ಮಕ್ಕಳಿಗೂ ಬೆದರಿಕೆ ಹಾಕಿ, ಮನೆಯಲ್ಲಿ ಕೂಡಿ ಹಾಕಿದ್ದ ಎಂದುಕೆ.ಟಿ.ಜೆ. ನಗರ ಪೊಲೀಸ್‌‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಸಿಪಿಐ ಸಂಘನಾಥ ಜಿ. ಶಂಕರನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು. ಶಂಕರನ ವಿರುದ್ಧ ಆರೋಪ ಸಾಬೀತಾದ ಕಾರಣ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಬಿ. ಗೀತಾಜೀವಾವಧಿ ಶಿಕ್ಷೆ, ದಂಡ ಹಾಗೂ ಮಕ್ಕಳಿಗೆ ಪರಿಹಾರವಾಗಿ ತಲಾ ₹ 20 ಸಾವಿರ ನೀಡಬೇಕು ಎಂದು ತೀರ್ಪು ನೀಡಿದ್ದಾರೆ.

ADVERTISEMENT

ಸರ್ಕಾರದ ಪರವಾಗಿ ಅಭಿಯೋಜಕರಾದ ಎಸ್‌.ವಿ. ಪಾಟೀಲ್, ಕೆ. ನಾಗರಾಜ್‌ ಆಚಾರ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.