ADVERTISEMENT

ಯುವತಿಯ ಕೊಲೆ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:36 IST
Last Updated 8 ಡಿಸೆಂಬರ್ 2018, 15:36 IST
ಯುವತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ರಂಗಸ್ವಾಮಿ ಅಲಿಯಾಸ್‌ ಕುಂಟರಂಗ
ಯುವತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ರಂಗಸ್ವಾಮಿ ಅಲಿಯಾಸ್‌ ಕುಂಟರಂಗ   

ದಾವಣಗೆರೆ: ಯುವತಿಯನ್ನು ಕೊಲೆಗೈದು ಅತ್ಯಾಚಾರ ಮಾಡಿದ್ದ ಕಕ್ಕರಗೊಳ್ಳದ ಎಸ್‌. ರಂಗಸ್ವಾಮಿ ಅಲಿಯಾಸ್‌ ಕುಂಟರಂಗ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಕ್ಟೋಬರ್‌ 9ರಂದು ಕೆಲಸ ಮುಗಿಸಿ ಮನೆಗೆ ಹೋಗಲು ಬಸ್‌ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ವೇಳೆ ಪರಿಚಯದ ರಂಗಸ್ವಾಮಿ ಬಂದು ಬೈಕಲ್ಲಿ ಕರೆದುಕೊಂಡು ಹೋಗಿದ್ದ. ಅರ್ಧದಾರಿಯಲ್ಲಿ ಹೊಲದ ಬಳಿ ಅತ್ಯಾಚಾರ ಮಾಡಲು ಯತ್ನಿಸಿದ್ದ. ಯುವತಿ ಪ್ರತಿರೋಧಿಸಿದಾಗ ಕೊಲೆ ಮಾಡಿ, ಅತ್ಯಾಚಾರ ಎಸಗಿ ಹೋಗಿದ್ದ.

ಮರುದಿನ ಯುವತಿಯ ಮೃತದೇಹವನ್ನು ವಿಷ್ಣುಪಂತ್‌ ಎಂಬವರು ನೋಡಿ ಮನೆಯವರಿಗೆ ವಿಚಾರ ತಿಳಿಸಿದ್ದರು. ಸ್ಥಳೀಯರು ಹಲವರು ಸ್ಥಳಕ್ಕೆ ಬಂದಿದ್ದಾಗ ಈತನೂ ಅವರ ಜತೆ ಬಂದು ಹೋಗಿದ್ದ. ಆನಂತರ ಬೇರೆಡೆಗೆ ಕೆಲಸಕ್ಕೆ ಹೋಗಿದ್ದ. ಯಾವುದೇ ಸಾಕ್ಷಿಗಳನ್ನು ಆರೋಪಿ ಉಳಿಸದೇ ಹೋಗಿದ್ದರಿಂದ ತನಿಖೆ ಕಗ್ಗಂಟಾಗಿತ್ತು. ಪೊಲೀಸರು 30ಕ್ಕೂ ಹೆಚ್ಚಿನ ಜನರನ್ನು ವಿಚಾರಣೆಗೆ ಒಳಪಡಿಸಿದ್ದರು.

ADVERTISEMENT

ಮಹಿಳಾ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗಮ್ಮ, ಡಿಸಿಐಬಿ ಇನ್‌ಸ್ಪೆಕ್ಟರ್‌ ಎಸ್‌.ಕೆ. ಶಂಕರ್‌ ನೇತೃತ್ವದ ವಿಶೇಷ ತಂಡ ಈ ಪ್ರಕರಣವನ್ನು ಭೇದಿಸಿದ್ದಾರೆ.

ಭತ್ತ ಕೊಯ್ಯುವ ಯಂತ್ರದ ಚಾಲಕನಾಗಿ ಕೆಲಸ ಮಾಡುವ ರಂಗಸ್ವಾಮಿಗೆ ಇತ್ತೀಚೆಗೆ ಮದುವೆಯೂ ಆಗಿತ್ತು ಎಂದು ಎಸ್‌ಪಿ ಆರ್‌.ಚೇತನ್‌ ತಿಳಿಸಿದ್ದಾರೆ.

ವಿಶೇಷ ತಂಡದಲ್ಲಿದ್ದ ಎಸ್‌ಐ ಕಿರಣ್‌ಕುಮಾರ್‌, ಸಿಬ್ಬಂದಿ ಅಶೋಕ್, ಕೆ.ಸಿ. ಮಜೀದ್‌, ರಾಘವೇಂದ್ರ, ಷಣ್ಮುಖ, ಸಿದ್ದೇಶ್‌, ಧನರಾಜ್‌, ಬಾಲರಾಜ್‌, ಹನುಮಂತಪ್ಪ ಗೋಪನಾಳ್‌, ಶಾಂತರಾಜ್‌, ರಮೇಶ್‌ ನಾಯ್ಕ, ಚಾಲಕ ನಾಗರಾಜ್‌, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್‌, ರಮೇಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ತಂಡಕ್ಕೆ ಎಸ್‌ಪಿ ಆರ್‌. ಚೇತನ್‌, ಎಎಸ್‌ಪಿ ಟಿ.ಜೆ. ಉದೇಶ್‌ ಬಹುಮಾನ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.