ಬಸವಾಪಟ್ಟಣ: ಭಾರಿ ಮಳೆಯಿಂದ ಇಲ್ಲಿನ 3,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳಕ್ಕೆ ಹಾನಿಯಾಗಿದ್ದು, ಫಸಲಿನ ಸೂಕ್ತ ನಿರ್ವಹಣೆಗಾಗಿ ಕೃಷಿ ಇಲಾಖೆ ಆಂದೋಲನ ಆರಂಭಿಸಿದೆ.
ಸಮೀಪದ ನಿಲೋಗಲ್ ಗ್ರಾಮದಲ್ಲಿ ಬುಧವಾರ ನಡೆದ ಆಂದೋಲನದಲ್ಲಿ ಮಾತನಾಡಿದ ಕೃಷಿ ಅಧಿಕಾರಿ ಎನ್. ಲತಾ, ‘ಅತಿಯಾದ ಮಳೆಯಿಂದ ಮೆಕ್ಕೆ ಜೋಳದ ಬೆಳೆ ನಾಶವಾಗಿದ್ದು, ರೈತರು ಮಾರುಕಟ್ಟೆಯಲ್ಲಿ ದೊರೆಯವ ನೈಂಟೀನ್ ಆಲ್ ಪೌಡರ್ ಅನ್ನು (ಎನ್ಪಿಕೆ) ಒಂದು ಎಕರೆಗೆ ಒಂದು ಕೆ.ಜಿಯಂತೆ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಇದರೊಂದಿಗೆ ನಮ್ಮ ರೈತ ಸಂಪರ್ಕ ಕೇಂದ್ರದಲ್ಲಿ ಶೇ 50ರಷ್ಟು ಸಹಾಯಧನದಲ್ಲಿ ದೊರೆಯುವ ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್, ಐರನ್ ಮತ್ತು ಮೆಗ್ನೀಷಿಯಂ ಒಳಗೊಂಡ ದ್ರವಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಎಕರೆಗೆ ಒಂದು ಲೀಟರ್ನಂತೆ ಸಿಂಪಡಣೆ ಮಾಡಬೇಕು. ಇದರಿಂದ ಫಸಲಿಗೆ ಸಾಕಷ್ಟು ಪೋಷಕಾಂಶಗಳು ದೊರೆತು ಉತ್ತಮವಾಗಿ ಬೆಳೆಯಲು ಸಾಧ್ಯ’ ಎಂದರು.
‘ಮಳೆಯಿಂದ ಪೋಷಕಾಂಶಗಳನ್ನು ಕಳೆದುಕೊಂಡ ಮೆಕ್ಕೆಜೋಳ ಹಳದಿ ಬಣ್ಣಕ್ಕೆ ತಿರುಗುತ್ತದೆ. ರೈತರು ಪೋಷಕಾಂಶ ನೀಡುವುದರೊಂದಿಗೆ 20/20/013 ರಾಸಾಯನಿಕ ಗೊಬ್ಬರವನ್ನು ಎಕರೆಗೆ 50 ಕೆ.ಜಿಯಂತೆ ಹಾಕಬೇಕು. ಇದರಿಂದ ಬೆಳೆ ಉತ್ಕೃಷ್ಟವಾಗಿ ಬೆಳೆದು ತೆನೆಗಳು ದೃಢಕಾಯವಾಗುತ್ತವೆ. ಬೆಳೆಗಳಿಗೆ ಯಾವುದೇ ರೀತಿಯ ರೋಗ ಅಥವಾ ಕೀಟ ಬಾಧೆ ಕಂಡುಬಂದಲ್ಲಿ ಕೂಡಲೇ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬೇಕು’ ಎಂದು ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್. ಅವಿನಾಶ್ ಸಲಹೆ ನೀಡಿದರು.
ರೈತ ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.