ADVERTISEMENT

ಸಬಲರು, ದುರ್ಬಲರ ಅಭಿವೃದ್ಧಿಗೆ ಶ್ರಮಿಸಲಿ: ಎನ್. ರುದ್ರಮುನಿ

ಛಲವಾದಿ ಮಹಾಸಭಾದ ಪದಾಧಿಕಾರಿಗಳ ಪದಗ್ರಹಣದಲ್ಲಿ ಎನ್. ರುದ್ರಮುನಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 2:45 IST
Last Updated 31 ಜನವರಿ 2023, 2:45 IST
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಭಾನುವಾರ ನಡೆದ ಛಲವಾದಿ ಮಹಾಸಭಾ ಹರಿಹರ ತಾಲ್ಲೂಕು ಘಟಕ ಹಾಗೂ ಮಹಾಸಭಾದ ಕೊಂಡಜ್ಜಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲ್ಲೂಕು ಮಟ್ಟದ ಪ್ರಥಮ ಸಮಾಲೋಚನಾ ಸಭೆ ಉದ್ಘಾಟಿಸಿ ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷ ಎನ್. ರುದ್ರಮುನಿ ಮಾತನಾಡಿದರು.
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಭಾನುವಾರ ನಡೆದ ಛಲವಾದಿ ಮಹಾಸಭಾ ಹರಿಹರ ತಾಲ್ಲೂಕು ಘಟಕ ಹಾಗೂ ಮಹಾಸಭಾದ ಕೊಂಡಜ್ಜಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲ್ಲೂಕು ಮಟ್ಟದ ಪ್ರಥಮ ಸಮಾಲೋಚನಾ ಸಭೆ ಉದ್ಘಾಟಿಸಿ ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷ ಎನ್. ರುದ್ರಮುನಿ ಮಾತನಾಡಿದರು.   

ಹರಿಹರ: ಶೋಷಿತ ಸಮುದಾಯದಲ್ಲಿರುವ ಸಬಲರು, ಸಮುದಾಯದಲ್ಲಿರುವ ದುರ್ಬಲರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಛಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಎನ್. ರುದ್ರಮನಿ ಸಲಹೆ ನೀಡಿದರು.

ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಭಾನುವಾರ ನಡೆದ ಹರಿಹರ ತಾಲ್ಲೂಕು ಛಲವಾದಿ ಮಹಾಸಭಾ ಹಾಗೂ ಮಹಾಸಭಾದ ಕೊಂಡಜ್ಜಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ತಾಲ್ಲೂಕು ಮಟ್ಟದ ಪ್ರಥಮ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮುದಾಯ ನಮಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸುವ ಬದಲು ಸಮುದಾಯದ ಸಂಘಟನೆಗೆ ನಮ್ಮಿಂದ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಬೇಕು. ಉದ್ಯೋಗ, ಉದ್ಯಮದ ಮೂಲಕ ಆರ್ಥಿಕ ಸಬಲತೆ ಹೊಂದಿದವರು, ದುರ್ಬಲರನ್ನು ಮುಖ್ಯವಾಹಿನಿಗೆ ತರಲು ಆದ್ಯತೆ ನೀಡಬೇಕು. ಸಮುದಾಯದ ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ADVERTISEMENT

ಯುವಕರು ಸಮುದಾಯದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದಕ್ಕಾಗಿ ಸಮಯ ವಿನಿಯೋಗಿಸಬೇಕು. ಸಮುದಾಯದ ಸಂಘಟನೆ ಹಿರಿಯರು, ವಯೋವೃದ್ಧರ ಜವಾಬ್ದಾರಿ ಎಂಬ ಭಾವನೆ ಬೇಡ ಎಂದು ಜಿಲ್ಲಾ ಛಲವಾದಿ ಮಹಾಸಭಾದ ಮಾಜಿ ಅಧ್ಯಕ್ಷ ಶೇಖರಪ್ಪ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಸಮುದಾಯದ ಜನ ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲ. ಅವರನ್ನು ಸಂಘಟಸಿ ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗಕ್ಕಾಗಿ ನೀಡುತ್ತಿರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹರಿಹರ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಡಾ.ಜಗನ್ನಾಥ್ ಹೇಳಿದರು.

ಸಮುದಾಯದ ಹಿರಿಯ ಮುಖಂಡ ಕೊಂಡಜ್ಜಿ ಹಾಲಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ತಾಲ್ಲೂಕು ಘಟಕ, ಕೊಂಡಜ್ಜಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.

ಬೆಸ್ಕಾಂ ನಿವೃತ್ತ ಎಇಇ ಉಮಾಮಹೇಶ್ವರ, ದಾವಣಗೆರೆ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್. ಜಯಪ್ಪ, ದಾವಣಗೆರೆ ತಾಲ್ಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ರವಿ ದೊಡ್ಮನಿ, ಗುತ್ತಿಗೆದಾರ ಎಚ್. ಚಂದ್ರಪ್ಪ, ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಎಚ್. ವಸಂತಪ್ಪ, ಸಮಿತಿಯ ಗೌರವ ಸಲಹೆಗಾರ ಎ.ಡಿ. ಕೊಟ್ರಪ್ಪ ಕೆ.ಎನ್. ಹಳ್ಳಿ, ಸಮಿತಿಯ ಲೆಕ್ಕ ಪರಿಶೋಧಕ ಎ.ಡಿ. ಕೊಟ್ರಬಸಪ್ಪ ಜಿಗಳಿ, ಛಲವಾದಿ ಮಹಾಸಭಾ ತಾಲ್ಲೂಕು ಘಟಕ ಉಪಾಧ್ಯಕ್ಷ ಎಸ್. ಭೀಮಪ್ಪ ಭಾನುವಳ್ಳಿ, ಪತ್ರಕರ್ತ ಸಂತೋಷ್ ಗುಡಿಮನಿ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.