ಚನ್ನಗಿರಿ: ‘ಒಂದೇ ದೇವರು, ಒಂದು ಧರ್ಮ, ಎಲ್ಲ ಮಾನವರಿಗೆ ಒಂದೇ ದೇವರು ಎಂಬ ಧ್ಯೇಯವನ್ನು ಹೊಂದಿದ ಮಹರ್ಷಿ ನಾರಾಯಣ ಗುರು ತತ್ವಜ್ಞಾನಿ, ಆಧ್ಯಾತ್ಮಿಕ ಚಿಂತಕ, ಸಮಾಜ ಸುಧಾರಕ ಹಾಗೂ ಶಿಕ್ಷಣ ಪ್ರೇಮಿಯಾಗಿದ್ದರು’ ಎಂದು ತಹಶೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಈಡಿಗ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗುರುಗಳು ಮನುಕುಲದ ಏಕತೆಯ ಆದರ್ಶವನ್ನು ಬೋಧಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಿದರು. ದೀನ ದಲಿತರ ಉನ್ನತಿಗಾಗಿ ಶಿಕ್ಷಣ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಅಗತ್ಯವನ್ನು ಒತ್ತಿ ಹೇಳಿದರು. ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಎಂದು ಪ್ರತಿಪಾದಿಸಿದರು ಎಂದರು.
ತನ್ನ ಸಂತೋಷದ ದಾರಿಯು ಇತರರಿಗೂ ಸಂತಸ ತರುವಂತಿರಬೇಕು ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳು, ಶೋಷಿತರನ್ನು ಒಗ್ಗೂಡಿಸಿ ಅವರಲ್ಲಿ ವಿದ್ಯಾಭ್ಯಾಸ, ಸ್ವಚ್ಛತೆ, ನೈರ್ಮಲ್ಯ ಹಾಗೂ ದೈವ ಶ್ರದ್ಧೆ ಬೆಳೆಸಿದರು. ಅವರ ಆದರ್ಶಗಳು ಇಂದಿಗೂ ಜಗತ್ತಿಗೆ ಸ್ಫೂರ್ತಿಯಾಗಿವೆ ಎಂದು ಹೇಳಿದರು.
ಈಡಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವೈ. ಗಂಗಾಧರ್, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಎಸ್. ರಂಗಸ್ವಾಮಿ, ದಯಾನಂದ್, ಆಂಜನೇಯ, ಬಾಲರಾಜ್, ಸುರೇಶ್, ರಮೇಶ್, ಶಿರಸ್ತೇದಾರ್ ಎಂ.ಎಲ್. ಮೋಹನ್. ರುದ್ರಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.