
ಬಸವಾಪಟ್ಟಣ: ಸಮೀಪದ ನಿಲೋಗಲ್ನಲ್ಲಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಬಿಎಸ್ಎನ್ಎಲ್ ನಿರ್ಮಿಸಿರುವ ಟೆಲಿಫೋನ್ ವ್ಯವಸ್ಥೆ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ.
‘ಗ್ರಾಮಕ್ಕೆ ಟೆಲಿಫೋನ್ ಸಂಪರ್ಕವೇ ಇಲ್ಲ ಎಂದು ಹಿಂದಿನ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಅವಧಿಯಲ್ಲಿ ಗ್ರಾಮಸ್ಥರು ಇಟ್ಟಿದ್ದ ಬೇಡಿಕೆಯ ಮೇರೆಗೆ ಮಂಜೂರಾಗಿದ್ದ ಟೆಲಿಫೋನ್ ಟವರ್ ಅನ್ನು ಬಿಎಸ್ಎನ್ಎಲ್ ಸೋಲಾರ್ ಆಧಾರಿತ ವ್ಯವಸ್ಥೆಯಲ್ಲಿ ಅಂದಾಜು ₹ 65 ಲಕ್ಷ ವೆಚ್ಚದಲ್ಲಿ ಎರಡು ತಿಂಗಳ ಹಿಂದೆ ನಿರ್ಮಿಎಲಾಗಿತ್ತು. ಆದರೆ, ಸೋಲಾರ್ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಇದಕ್ಕೆ ಪಕ್ಕದಲ್ಲಿರುವ ವಿದ್ಯುತ್ ಕಂಬದಿಂದ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಚಾಲನೆ ನೀಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಕೆ.ರಂಗಪ್ಪ ತಿಳಿಸಿದರು.
‘ಆದರೆ, ಬಿಎಸ್ಎನ್ಎಲ್ ಸಂಸ್ಥೆಯ ಯಾವ ಸಿಬ್ಬಂದಿಯೂ ಇಲ್ಲಿಗೆ ಬಂದು ನಿರ್ವಹಣೆ ಮಾಡದೇ ಇರುವುದರಿಂದ ಕಿಡಿಗೇಡಿಗಳು ದಿನ ದಿನಕ್ಕೂ ಇದರ ಉಪಕರಣಗಳನ್ನು ಹಾಳು ಮಾಡುತ್ತಿದ್ದಾರೆ. ಟೆಲಿಫೋನ್ ಸ್ಥಾವರದ ಸುತ್ತಲೂ ಸುಭದ್ರ ತಂತಿ ಬೇಲಿ ಅಳವಡಿಸದೇ ಇರುವುದರಿಂದ ಇಲ್ಲಿನ ತಾಂತ್ರಿಕ ವ್ಯವಸ್ಥೆ ಹಾಳಾಗುತ್ತಿದೆ’ ಎಂದು ಗ್ರಾಮದ ಎನ್.ರಂಗನಾಥ್ ದೂರಿದರು.
‘ಸೋಲಾರ್ ಪ್ಯಾನಲ್ಗಳನ್ನು ಕಲ್ಲಿನಿಂದ ಜಜ್ಜುತ್ತಿರುವುದರಿಂದ ಸ್ಥಾವರಕ್ಕೆ ಅಳವಡಿಸಿರುವ 6X4 ಅಡಿ ಅಳತೆಯ 20 ಪ್ಯಾನಲ್ಗಳು ಮಕ್ಕಳ ಕೈಗೆ ಸಿಗುವಷ್ಟು ಕೆಳಮಟ್ಟಕ್ಕೆ ಇರುವುದರಿಂದ ಆತಂಕ ಎದುರಾಗಿದೆ. ಅಲ್ಲದೇ ಟೆಲಿಫೋನ್ ಗೋಪುರಕ್ಕೆ ಸಂಪರ್ಕ ಕಲ್ಪಿಸುವ ಅಲ್ಯುಮಿನಿಯಂ ರಾಡುಗಳನ್ನು ಮುರಿದು ಹಾಕಲಾಗಿದೆ. ಸ್ವಲ್ಪ ದಿನಗಳಲ್ಲಿ ಸ್ಥಾವರದ ಎಲ್ಲ ವಸ್ತುಗಳು ಹಾಳಾಗಿ ಮತ್ತೆ ನಮ್ಮ ಗ್ರಾಮಕ್ಕೆ ಟೆಲಿಫೋನ್ ಸಂಪರ್ಕ ಇಲ್ಲದಂತಾಗುತ್ತದೆ. ಕೂಡಲೇ ಈ ಸ್ಥಾವರಕ್ಕೆ ಸುಭದ್ರ ತಂತಿ ಬೇಲಿ ನಿರ್ಮಿಸಿ, ಸೋಲಾರ್ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಸತ್ಯನಾರಾಯಣ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.