ಮಲೇಬೆನ್ನೂರು: ಸಮೀಪದ ನಿಟ್ಟೂರು ಗ್ರಾಮದಲ್ಲಿ ಭಾನುವಾರ ಒಂದೆ ಕುಟುಂಬದ ಮೂವರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದ ಕಾರಣ ಬೇಸರಗೊಂಡ ಗ್ರಾಮಸ್ಥರು ಕೆಲಕಾಲ ಮತದಾನದಿಂದ ದೂರ ಉಳಿದರು.ತಹಶೀಲ್ದಾರ್ ರಾಮಚಂದ್ರಪ್ಪ, ಸಿಪಿಐ ಶಿವಪ್ರಸಾದ್ ಗ್ರಾಮಸ್ಥರ ಮನವೊಲಿಸಿದರು. ಬಳಿಕ ಮತದಾನ ನಡೆಯಿತು.
ಹಲವಾರು ವರ್ಷದಿಂದ ಗ್ರಾಮ ಪಂಚಾಯಿತಿಗೆ ಗ್ರಾಮದಲ್ಲಿ ಅವಿರೋಧ ಆಯ್ಕೆ ನಡೆಯುತ್ತಿತ್ತು. ಈ ಬಾರಿ 7 ಸ್ಥಾನಗಳ ಪೈಕಿ 4ಕ್ಕೆ ಅವಿರೋಧವಾಗಿ ಆಯ್ಕೆ ಆಗಿತ್ತು. ಉಳಿದ ಮೂರು ಸ್ಥಾನಕ್ಕೆ ಒಂದೇ ಕುಟುಂಬದ ಪತಿ, ಪತ್ನಿ, ಮಗ 2 ವಾರ್ಡ್ಗಳಲ್ಲಿ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರು.
ಸಂಧಾನ ಸಭೆಯಲ್ಲಿ ಗ್ರಾಮಸ್ಥರು ಒಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಅಭ್ಯರ್ಥಿಗಳು ಒಪ್ಪದೆ ಇದ್ದ ಕಾರಣ ಬೇರೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದವು.
ಹಿಂದಿನ ಸಂಧಾನ ವಿಫಲವಾದ ಕಾರಣ ಗ್ರಾಮಸ್ಥರು ಮತದಾನ ಕೇಂದ್ರಕ್ಕೆ ಬರಲಿಲ್ಲ. ಮೂರು ವಾರ್ಡಿನಿಂದ ಬೆಳಿಗ್ಗೆ 11ರ ವರೆಗೆ ಕೇವಲ 17 ಮತ ಮಾತ್ರ ಚಲಾವಣೆಯಾಗಿದ್ದವು.
ವಿಷಯ ತಿಳಿದ ತಹಶೀಲ್ದಾರ್ ರಾಮಚಂದ್ರಪ್ಪ, ಸಿಪಿಐ ಶಿವಪ್ರಸಾದ್, ನೋಡಲ್ ಅಧಿಕಾರಿ ಲೋಕೇಶ್, ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್, ಹೇಮಂತ್ ಬಂದು ಪರಿಸ್ಥಿತಿ ಅವಲೋಕಿಸಿದರು. ಮತದಾನ ಕೇಂದ್ರಕ್ಕೆ ಬಂದು ಸಮಸ್ಯೆ ಕುರಿತು ಗ್ರಾಮದ ಮುಖಂಡರೊಡನೆ ಚರ್ಚಿಸಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಿದರು. ಬಳಿಕ ಮತದಾನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.