ADVERTISEMENT

ಉಡುಗೊರೆ ನೀಡಿದ್ದ ಸೀರೆ ಸುಟ್ಟು ಮಹಿಳೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 6:59 IST
Last Updated 31 ಮಾರ್ಚ್ 2023, 6:59 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಾಷಾ ನಗರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಗೊರೆ ನೀಡಿದ್ದ ಸೀರೆಗಳನ್ನು ಸುಟ್ಟು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಾಷಾ ನಗರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಗೊರೆ ನೀಡಿದ್ದ ಸೀರೆಗಳನ್ನು ಸುಟ್ಟು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.   

ದಾವಣಗೆರೆ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಾಷಾ ನಗರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ನೀಡಿದ್ದ ಸೀರೆಗಳನ್ನು ಸುಟ್ಟು ಮಹಿಳೆಯರು ಬುಧವಾರ ರಾತ್ರಿ ಆಕ್ರೋಶ ವ್ಯಕ್ತಪಡಿಸಿದರು.

‘ಇಲ್ಲಿ ಸರಿಯಾದ ಚರಂಡಿ ಇಲ್ಲ, ರಸ್ತೆ ಇಲ್ಲ. ಪ್ರಾಣಿಗಳು ವಾಸ ಮಾಡುವ ರೀತಿ ನಾವು ವಾಸ ಮಾಡುತ್ತಾ ಇದ್ದೇವೆ. ಮೂಲ ಸೌಕರ್ಯಗಳನ್ನು ಒದಗಿಸಿ ಎಂದರೆ ನಾಯಕರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಆದರೆ ಈಗ ಸೀರೆಗಳನ್ನು ಕೊಟ್ಟು ಹೋಗುತ್ತಿದ್ದಾರೆ. ಈ ಸೀರೆಗಳು ಬೇಡ. ನಮಗೆ ಅಭಿವೃದ್ಧಿ ಬೇಕು’ ಎಂದು ಮಹಿಳೆಯರು ಆಗ್ರಹಿಸಿದರು.

‘₹ 50–₹ 60 ಸೀರೆ ಹಂಚಿದ್ದಾರೆ. ಇದಕ್ಕಿಂತಲೂ ಉತ್ತಮವಾದ ಸೀರೆಗಳು ನಮ್ಮಲ್ಲಿ ಇವೆ’ ಎಂದು ಮಹಿಳೆಯರು ಕೊಟ್ಟ ಸೀರೆಗಳನ್ನು ರಸ್ತೆಯಲ್ಲಿ ಎಸೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಾಷಾನಗರ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ 12ನೇ ವಾರ್ಡ್‌ನಲ್ಲಿ ಬಹುತೇಕ ಮುಸ್ಲಿಂ ಮಹಿಳೆಯರು ಉಡುಗೊರೆ ನೀಡಿದ್ದ ಸೀರೆಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

‘ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ದುಡ್ಡು ಕೊಟ್ಟರೆ ವೋಟು ಹಾಕುತ್ತಾರೆ ಎಂದುಕೊಂಡಿದ್ಧೀರಿ, ನಮಗೆ ನಿಮ್ಮ ₹ 50ರ ಸೀರೆ ಬೇಡ, ಎಷ್ಟೇ ಹಣ ಕೊಟ್ಟರೂ ನಾವು ಮತ ಮಾರಿಕೊಳ್ಳುವುದಿಲ್ಲ. ನಮಗೆ ಅಭಿವೃದ್ಧಿ ಬೇಕು’ ಎಂದು ಸೀರೆ ಹಂಚಿದವರ ವಿರುದ್ಧ ಹರಿಹಾಯ್ದರು.

ಬಾಷಾನಗರ ಸೇರಿದಂತೆ ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಈಚೆಗೆ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಭಾವಚಿತ್ರ ಇರುವ ಕವರ್‌ಗಳಲ್ಲಿ ಮಹಿಳೆಯರಿಗೆ ಸೀರೆ ಹಂಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.