ADVERTISEMENT

29ರಂದು ದಾವಣಗೆರೆಗೆ ಪಂಚಮಸಾಲಿ ಪಾದಯಾತ್ರೆ

ವಚನಾನಂದ ಸ್ವಾಮೀಜಿಯವರನ್ನು ಆಹ್ವಾನಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:46 IST
Last Updated 24 ಜನವರಿ 2021, 5:46 IST

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘2ಎ’ ಮೀಸಲಾತಿಗೆ ಆಗ್ರಹಿಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ.14ರಿಂದ ಕೂಡಲ ಸಂಗಮದಿಂದ ಆರಂಭವಾಗಿರುವ ಪಾದಯಾತ್ರೆ ಜ.29ರಂದು ದಾವಣಗೆರೆ ಪ್ರವೇಶಿಸಲಿದೆ.

ಪಾದಯಾತ್ರೆಯ ಸಿದ್ಧತೆ ಕುರಿತು ಸಮಾಜದ ಮುಖಂಡರ ಜೊತೆ ಇಲ್ಲಿನ ಚೇತನಾ ಹೋಟೆಲ್‌ನಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ನಂತರಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಎಚ್.ಎಸ್.ನಾಗರಾಜ್ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.

ADVERTISEMENT

‘ಪಾದಯಾತ್ರೆಯು ಜ.28ರಂದು ಹರಿಹರ ಪ್ರವೇಶಿಸುವುದು. ಅಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, 29ರಂದು ಬಾತಿಯಲ್ಲಿ ಪ್ರವೇಶಿಸುವುದು. ಅಲ್ಲಿಂದ ಪಿ.ಬಿ.ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಆ ಬಳಿಕ 500 ಮಹಿಳೆಯರು ಪೂರ್ಣಕುಂಭಗಳ ಮೂಲಕ ಸ್ವಾಮೀಜಿಗಳನ್ನು ಸ್ವಾಗತಿಸು
ವರು’ ಎಂದು ಮಾಹಿತಿ
ನೀಡಿದರು.

‘ಆನಂತರ ನಂದಿಕೋಲು, ಡೊಳ್ಳು, ಭಾಜ ಭಜಂತ್ರಿಗಳೊಂದಿಗೆ 10 ಸಾವಿರಕ್ಕೂ ಹೆಚ್ಚು ಜನ ಸೇರಿ ಸ್ವಾಮೀಜಿಗಳನ್ನು ಸ್ವಾಗತಿಸಲು ತಯಾರು ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 90 ಲಕ್ಷ ಜನಸಂಖ್ಯೆಯುಳ್ಳ ಸಮುದಾಯ ನಮ್ಮದು. ಸರ್ಕಾರದಿಂದ ಆದ ಅನ್ಯಾಯವನ್ನು ಸರಿಪಡಿಸಲು, ಸಮುದಾಯದ ಮಕ್ಕಳ ಶಿಕ್ಷಣದ ಉದ್ದೇಶದಿಂದ ಸ್ವಾಮೀಜಿಗಳು ಕೂಡಲ ಸಂಗಮದಿಂದ ಬೆಂಗಳೂರಿಗೆ 600 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದರು.

‘ಸಂಜೆ 4 ಗಂಟೆಗೆ ಬೀರೇಶ್ವರ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು,ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಮಾಜದ ಹಿರಿಯರನ್ನು ಆಹ್ವಾನಿಸಲಾಗುವುದು’ ಎಂದು ಹೇಳಿದರು.

‘ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ಹರಿಹರ ಪೀಠದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪೀಠಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರು ಸ್ವಾಮೀಜಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಹರಜಾತ್ರೆಯಲ್ಲಿ ಸಚಿವ ಮುರುಗೇಶ ನಿರಾಣಿ ಹೇಳಿದ್ದು, ಅವರ ವೈಯಕ್ತಿಕ ಅಭಿಪ್ರಾಯ. ಸಮಾಜದ್ದಲ್ಲ. ಅವರು ಸಚಿವರಾಗುವುದಕ್ಕೂ ಮುನ್ನ ನಮ್ಮ ಹೋರಾಟದಲ್ಲಿ ಇದ್ದರು’ ಎಂದು ಹೇಳಿದರು.

ಮೀಸಲಾತಿ ಜಾರಿಗೊಳಿಸದೇ ಇದ್ದರೆ ಉಗ್ರ ಹೋರಾಟ: 2ಎ ಮೀಸಲಾತಿ ಜಾರಿಗೊಳಿಸದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್.ಎಸ್.ನಾಗರಾಜ್ ಹೇಳಿದರು.

‘2ಎ ಮೀಸಲಾತಿ ಜಾರಿಗೊಳಿಸುವುದು ರಾಜ್ಯ ಸರ್ಕಾರದ ಇತಿಮಿತಿಯಲ್ಲಿ ಇದ್ದು, ಮುಖ್ಯಮಂತ್ರಿಗಳಿಗೆ ಆ ಅಧಿಕಾರವಿದೆ. ಪಾದಯಾತ್ರೆ ಮುಗಿಯುವ ವೇಳೆಗೆ ಮೀಸಲಾತಿ ಘೋಷಿಸುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಸಮುದಾಯವನ್ನು ಮರೆತರೆ ಸರ್ಕಾರಕ್ಕೆ ಆಪತ್ತು’ ಎಂದು ಎಚ್ಚರಿಸಿದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್, ಪ್ರಧಾನ ಕಾರ್ಯದರ್ಶಿ ಪ್ರಭು ಕಲಬುರ್ಗಿ, ಎಪಿಎಂಸಿ ಅಧ್ಯಕ್ಷ ಎಸ್‌.ಕೆ. ಚಂದ್ರಶೇಖರ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಸಮಾಜದ ಮುಖಂಡರಾದ ಎ.ಎಚ್.ಉಚ್ಚಪ್ಪ ಮಾಸ್ತರ್, ಗಂಗಾಧರ್, ಗೋಪನಾಳ್ ಅಶೋಕ್, ಶ್ರೀಧರ್ ಪಟೇಲ್, ಗೋಪನಾಳ್ ಕರಿಬಸಪ್ಪ, ಬಾದಾಮಿ ಮಲ್ಲಣ್ಣ, ಎಸ್.ಪಾಟೀಲ್, ಆಶಾ, ಮಂಜಣ್ಣ, ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.