ಸಂತೇಬೆನ್ನೂರು: ಇಲ್ಲಿಯ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಪಿಳ್ಳಮ್ಮ ದೇಗುಲದ ಬಳಿ ಬುಧವಾರ ರಾತ್ರಿ ವಾಹನವೊಂದು ರಸ್ತೆಯಲ್ಲಿ ಮಲಗಿದ್ದ ಮೂರು ದೇವರ ಹಸುವಿನ ಕರುಗಳ ಮೇಲೆ ಹರಿದು ಹೋದ ಪರಿಣಾಮ, ಅವು ಸ್ಥಳದಲ್ಲಿಯೇ ಮೃತಪಟ್ಟವು.
ಈಶ್ವರ ದೇವರ ಹಸು ತನ್ನ ಮೂರು ಕರುಗಳೊಂದಿಗೆ ಸದಾ ಗ್ರಾಮದಲ್ಲಿ ಓಡಾಡಿಕೊಂಡಿತ್ತು. ಈ ಹಸು ಹಾಗೂ ಕರುಗಳು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವು. ಒಂದು ವರ್ಷದಿಂದ ಮೂರು ವರ್ಷ ವಯೋಮಾನದ ಕರುಗಳು ಹಸಿರು ಮೇಯ್ದು ಮನೆಯಂಗಳ, ರಸ್ತೆಯಲ್ಲಿ ಮಲಗುತ್ತಿದ್ದವು. ಬುಧವಾರ ರಾತ್ರಿ 9ರ ವೇಳೆಗೆ ರಸ್ತೆಯಲ್ಲಿ ಕತ್ತು ಚಾಚಿ ಮಲಗಿದ್ದ ಮೂರು ಕರುಗಳ ಕತ್ತು ಹಾಗೂ ಮುಖದ ಮೇಲೆ ವಾಹನ ಹರಿದಿದೆ. ಈ ಮೂಕ ಜೀವಗಳ ಸಾವು ಎಲ್ಲರ ಹೃದಯ ಮಿಡಿಯಿತು.
ಕಂದಮ್ಮಗಳ ಸಾವಿನಿಂದ ಕಂಗಾಲಾಗಿದ್ದ ತಾಯಿ ಹಸು ಅತ್ತಿಂದಿತ್ತ ಓಡಾಡುತ್ತ ಅಂಬಾ... ಎಂದು ಕೂಗುತ್ತ ಅರಸುತ್ತಿದ್ದ ದೃಶ್ಯ ಎಲ್ಲರೂ ಕಣ್ಣೀರುಗರೆಯುವಂತೆ ಮಾಡಿತು. ದೇವರ ಹಸು ಕರುಗಳನ್ನು ಬಿಟ್ಟು ಕದಲದೇ ಬೆಳಗಿನವರೆಗೂ ರೋದಿಸುತ್ತಿತ್ತು.
ಮೃತ ಹಸುಕರುಗಳಿಗೆ ಗ್ರಾಮಸ್ಥರು ಹೂವಿನ ಹಾರ ಅರ್ಪಿಸಿದರು. ಟ್ರ್ಯಾಕ್ಟರ್ ಮೂಲಕ ಮೆರವಣಿಗೆಯಲ್ಲಿ ಸಾಗಿಸಿದರು. ಈಶ್ವರ ದೇಗುಲದ ಬಳಿ ಗುರುವಾರ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.