ದಾವಣಗೆರೆ: ನಾಗರಹಾವಿನ ಮೇಲೆ ದಾಳಿ ಮಾಡುತ್ತಿದ್ದ ಮುಂಗುಸಿಯನ್ನು ಹಂದಿಗಳ ಹಾಗೂ ಕಾಗೆಗಳ ಹಿಂಡು ಓಡಿಸುವ ಮೂಲಕ ಹಾವನ್ನು ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಲ್ಲೂಕಿನ ತುರ್ಚಘಟ್ಟದ ರಸ್ತೆಯೊಂದರ ಮೇಲೆ ಹಂದಿ ಹಾಗೂ ಕಾಗೆಗಳು ಮುಂಗುಸಿಯನ್ನು ಓಡಿಸಿದೆ ಎಂದು ಹೇಳಲಾಗುತ್ತಿದ್ದರೂ ಘಟನೆ ನಡೆದ ಸ್ಥಳ ಇನ್ನೂ ಖಚಿತವಾಗಿಲ್ಲ.
ಮಣ್ಣು ರಸ್ತೆಯ ಮೇಲೆ ನಾಗರಹಾವು ಹಾಗೂ ಮುಂಗುಸಿ ಕಾದಾಡುತ್ತಿರುತ್ತವೆ. ಮುಂಗುಸಿಯು ನಾಗರಹಾವನ್ನು ಹಿಡಿಯಲು ಯತ್ನಿಸಿದಾಗ ಹಂದಿಗಳು ಬಂದು ಮುಂಗುಸಿಯನ್ನು ಓಡಿಸುತ್ತವೆ. ಅಲ್ಲದೇ ಕಾಗೆಗಳೂ ಕೂಗಾಡುತ್ತ, ಹಾವಿನ ಬಳಿ ಮುಂಗುಸಿ ಬರುವುದನ್ನು ತಡೆಯಲು ಯತ್ನಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
2 ನಿಮಿಷ 37 ಸೆಕೆಂಡ್ಗಳ ಈ ವಿಡಿಯೊದ ಕೊನೆಯಲ್ಲಿ ಕಾಗೆ ಹಾಗೂ ಹಂದಿಗಳ ಹಿಂಡು ಮುಂಗುಸಿಯನ್ನು ಓಡಿಸಿ ಹಾವನ್ನು ರಕ್ಷಿಸಿದ ಅಪರೂಪದ ದೃಶ್ಯ ಸೆರೆಯಾಗಿದೆ. ‘ಮುಂಗುಸಿಗೆ ಕಲ್ಲಿನಿಂದ ಹೊಡೆದರೆ ನಾಗರಹಾವಿಗೆ ತಾಗಿ ಗಾಯವಾಗಬಹುದು. ನೋಡು, ಹಂದಿ ಹಾಗೂ ಕಾಗೆಗಳೇ ಮುಂಗುಸಿಯನ್ನು ಹೇಗೆ ಓಡಿಸುತ್ತಿವೆ’ ಎಂದು ಇಬ್ಬರು ಮರಾಠಿ ಭಾಷೆಯಲ್ಲಿ ಸಂಭಾಷಣೆ ಮಾಡಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.
ಎಲ್ಲಾ ಪ್ರಾಣಿ, ಪಕ್ಷಿಗಳು ಒಂದಾಗಿ ಬದುಕುಬೇಕು ಎಂಬ ಪಂಚತಂತ್ರದ ಕಥೆಯ ಸಂದೇಶ ಈ ದೃಶ್ಯ ಸಾರುವಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.