ಹೊನ್ನಾಳಿ: ಪುರಸಭೆ ವತಿಯಿಂದ ಮಂಗಳವಾರ ಪೂರೈಕೆಯಾದ ಕುಡಿಯುವ ನೀರು ಕಸ, ಕಡ್ಡಿ, ಮಣ್ಣು ಮಿಶ್ರಿತವಾಗಿದ್ದು, ಕುಡಿಯಲು ಯೋಗ್ಯವಾಗಿರಲಿಲ್ಲ ಎಂದು ಪಟ್ಟಣದ ನಿವಾಸಿಗಳು ದೂರಿದ್ದಾರೆ.
ಮಳೆ ಬಂದಾಗ ನದಿಯ ನೀರು ಕೆಸರು ಮಿಶ್ರಿತವಾಗಿ ಬರುವುದು ಸರ್ವೇ ಸಾಮಾನ್ಯ. ಇಂತಹ ನೀರನ್ನು ಪೂರೈಸುವ ಮುನ್ನ ಹಿಂದಿನ ದಿನ ನೀರನ್ನು ಜಾಕ್ವೆಲ್ ಮೂಲಕ ಎತ್ತಿ, ಫಿಲ್ಟರ್ ಮಾಡಿ, ಅಗತ್ಯ ಕಂಡುಬಂದರೆ ಅದಕ್ಕೆ ಆಲಂ ಪೌಡರ್ ಬೆರೆಸಿ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಮಳೆ ಬಂದಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ನದಿಯಿಂದ ಯಾವುದೇ ಫಿಲ್ಟರ್ ಮಾಡದೇ ನೇರವಾಗಿ ಜನರಿಗೆ ನೀರು ಪೂರೈಸುತ್ತಿರುವುದು ಎಷ್ಟು ಸರಿ ಎಂದು ಅರುಣ್ಕುಮಾರ್ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಶೇ 80 ರಷ್ಟು ಬಡ ಹಾಗೂ ಮಧ್ಯಮ ವರ್ಗದವರು ವಾಸಿಸುತ್ತಿದ್ದಾರೆ. ಈ ಮನೆಗಳಲ್ಲಿ ನದಿಯಿಂದ ಬರುವ ನೀರನ್ನು ಶುದ್ಧ ಮಾಡಿ ಕುಡಿಯುವ ವ್ಯವಸ್ಥೆ ಇಲ್ಲ. ಪುರಸಭೆಯಿಂದ ಬರುವ ನೀರನ್ನೇ ನೇರವಾಗಿ ಕುಡಿಯಲು ಬಳಸುತ್ತಾರೆ. ಹೀಗಿರುವಾಗ ನೀರನ್ನು ಶುದ್ಧ ಮಾಡಿ ಪೂರೈಕೆ ಮಾಡದೆ ಇದ್ದರೆ ಜನ ಹೇಗೆ ಈ ನೀರನ್ನು ಕುಡಿಯಬೇಕು ಎಂದು ದುರ್ಗಿಗುಡಿ ನಿವಾಸಿ ಚನ್ನವೀರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಇಂತಹ ನೀರು ಕುಡಿಯುವುದಿರಲಿ, ಬಟ್ಟೆ ತೊಳೆಯುವುದಕ್ಕೂ ಯೋಗ್ಯವಾಗಿಲ್ಲ. ನೀರಿನ ಪೂರೈಕೆ ಮಾಡುವಾಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಇಂಥಹ ನಿರ್ಲಕ್ಷ್ಯ ಸರಿಯಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಮಾಡುವವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಗೃಹಿಣಿ ಹೇಮಾ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.