
ದಾವಣಗೆರೆ: ‘ವಿಶ್ವಮಾನವ’ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಏಳು ತಿಂಗಳ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಕ್ಯಾರಕಟ್ಟೆ ಗ್ರಾಮದ ನಾಗಮ್ಮ ಪ್ರಕಾಶ್ (26) ಮಗುವಿಗೆ ಜನ್ಮನೀಡಿದ ಮಹಿಳೆ. ಹೊಳಲ್ಕೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ–ಮಗು ಆರೋಗ್ಯವಾಗಿದ್ದಾರೆ ಎಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು ಜಿಲ್ಲೆಯ ಕಾಫಿ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ನಾಗಮ್ಮ, ಏಳು ತಿಂಗಳ ಗರ್ಭಿಣಿ. ಪತಿ ಪ್ರಕಾಶ್ ಅವರೊಂದಿಗೆ ಹೆರಿಗೆಗೆ ಸೋಮವಾರ ಗ್ರಾಮಕ್ಕೆ ಮರಳುತ್ತಿದ್ದರು. ಕಡೂರಿನಿಂದ ವಿಶ್ವಮಾನವ ರೈಲು ಏರಿದ ದಂಪತಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದರು. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಮೀಪ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಮೂಲಗಳು ವಿವರಿಸಿವೆ.
ಇದೇ ರೈಲಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಸವಿತಾ ಎಚ್.ಬಿ. ಹಾಗೂ ವೃದ್ಧೆಯೊಬ್ಬರು ಗರ್ಭಿಣಿಯ ನೆರವಿಗೆ ಧಾವಿಸಿದ್ದಾರೆ. ರೈಲಿನಲ್ಲಿ ಹೆರಿಗೆಯಾದ ಮಾಹಿತಿಯನ್ನು ಚಿಕ್ಕಜಾಜೂರು ರೈಲು ನಿಲ್ದಾಣಕ್ಕೆ ತಲುಪಿಸಿದ ಪೊಲೀಸರು, ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.