ADVERTISEMENT

ತಂಬಾಕು ಮುಕ್ತ ನಗರ ಘೋಷಣೆಗೆ ಸಿದ್ಧತೆ: ಪೂಜಾರ ವೀರಮಲ್ಲಪ್ಪ

ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿ ಸಭೆಯಲ್ಲಿ ಪೂಜಾರ ವೀರಮಲ್ಲಪ್ಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 6:02 IST
Last Updated 28 ಆಗಸ್ಟ್ 2020, 6:02 IST
ಪೂಜಾರ ವೀರಮಲ್ಲಪ್ಪ
ಪೂಜಾರ ವೀರಮಲ್ಲಪ್ಪ   

ದಾವಣಗೆರೆ: ತಂಬಾಕು ಮುಕ್ತವಾಗುವ ನಿಟ್ಟಿನಲ್ಲಿ ನಗರವು ಪ್ರಗತಿ ಸಾಧಿಸಿದೆ. ಮುಂಬರುವ ದಿನಗಳಲ್ಲಿ ನಗರವನ್ನು ತಂಬಾಕು ಮುಕ್ತ ಎಂದು ಘೋಷಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯ ಜಿಲ್ಲಾವಾರು ಸಮನ್ವಯ ಸಮಿತಿ (ಡಿಎಲ್‌ಸಿಸಿ)ಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಸಂಸ್ಥೆಗಳ ಆವರಣದ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ವಿದ್ಯಾಲಯಗಳ ಬಳಿ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೇ ಕ್ರಮ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ಶಾಲಾ ಆವರಣದಲ್ಲಿನ ಡಬ್ಬಿ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ಒಳಗಡೆ ತಂಬಾಕು ಉತ್ಪನ್ನ ಇಟ್ಟು ಮಾರಾಟ ಮಾಡಲಾಗುತ್ತಿದೆ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ತಿಳಿಸಿದರು.

ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಆವರಣಗಳ ಗೋಡೆಗಳ ಮೇಲೆ ಎಚ್ಚರಿಕೆ ಸಂದೇಶವನ್ನು ಬರೆಯಿಸಬೇಕು. ಎಲ್ಲ ಶಾಲಾ ಕಾಲೇಜು ಆವರಣಗಳ ಗೋಡೆಗಳ ಮೇಲೆ ಗೋಡೆ ಬರಹ ಬರೆಯಿಸಿದ ಕುರಿತು ವರದಿಯನ್ನು ಅಧಿಕಾರಿಗಳು ಸಲ್ಲಿಸಬೇಕು ಎಂದು ಪೂಜಾರ ವೀರಮಲ್ಲಪ್ಪ ಸೂಚಿಸಿದರು.

ಶಾಲಾ ಕಾಲೇಜು ಆವರಣಗಳ ಗೋಡೆಗಳ ಮೇಲೆ ಗೋಡೆ ಬರಹ ಬರೆಸಲು ಈಗಾಗಲೇ ಕ್ರಮವಹಿಸಲಾಗಿದೆ., ದಕ್ಷಿಣ ವಲಯದಲ್ಲಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ ೨೦೦೩) ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ದಂಡ ವಿಧಿಸುವುದಲ್ಲದೆ, ಪ್ರಕರಣಗಳನ್ನು ದಾಖಲಿಸಲು ಜಿಲ್ಲೆಯಾದ್ಯಂತ ದಾಳಿಗಳನ್ನು ಆಯಾ ತಾಲ್ಲೂಕು ತಹಶೀಲ್ದಾರರು ಹೆಚ್ಚಿಸಬೇಕು. ಪೊಲೀಸ್, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕಾರ್ಮಿಕ ನಿರೀಕ್ಷಕರ ತಂಡ ಸೇರಿಕೊಂಡು ಪ್ರತಿ ತಿಂಗಳು ಮೂರ್ನಾಲ್ಕು ಬಾರಿ ದಾಳಿ ನಡೆಸಬೇಕು. ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಕೋಟ್ಪಾ ಸಭೆ ನಡೆಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ತಂಬಾಕು ಉತ್ಪನ್ನಗಳ ಬಳಕೆಗೆ ದಂಡ ವಿಧಿಸುವ ಕುರಿತು ಎಚ್ಚರಿಕೆ ಫಲಕವನ್ನು ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಆವರಣದಲ್ಲಿ ಅಳವಡಿಸಬೇಕು ಎಂದು ಸೂಚನೆ ನೀಡಿದರು.

ಮೂವತ್ತಕ್ಕಿಂತ ಹೆಚ್ಚು ಆಸನ ಹೊಂದಿರುವ ಹೋಟೆಲ್ ಮತ್ತು ಬಾರ್ ಆಂಡ್ ರೆಸ್ಟೋರೆಂಟ್‌ಗಳಲ್ಲಿ ’ಸ್ಮೋಕಿಂಗ್ ಜೋನ್’ ಅಳವಡಿಸಿಕೊಳ್ಳುವಂತೆ ನೋಟಿಸ್ ಜಾರಿ ಮಾಡಬೇಕು ಎಂದರು.

ಜೆಜೆಎಂ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನವೀನ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಸತೀಶ್ ಕಲಹಾಳ್ ಮಾಹಿತಿ ನೀಡಿದರು.

ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಧೂಮಪಾನ ನಿಯಂತ್ರಣ ಕುರಿತ ಪ್ರಕಟಣೆ ಬಿಡುಗಡೆಗೊಳಿಸಲಾಯಿತು. ತಂಬಾಕು ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮಾಧಿಕಾರಿ ಡಾ.ಕೆ.ಎಚ್. ಗಂಗಾಧರ್, ನಗರ ಡಿವೈಎಸ್‌ಪಿ ನಾಗೇಶ್ ಐತಾಳ್, ತಹಶೀಲ್ದಾರ್‌ ನಾಗವೇಣಿ, ತನುಜಾ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.