ADVERTISEMENT

ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಐಎಂಎ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡವರಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 16:21 IST
Last Updated 18 ಜೂನ್ 2019, 16:21 IST
ಐ.ಎಂ.ಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಹಣವನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಕಂಪನಿಯಿಂದ ಹಣ ಕಳೆದುಕೊಂಡವರು ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಐ.ಎಂ.ಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಹಣವನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಕಂಪನಿಯಿಂದ ಹಣ ಕಳೆದುಕೊಂಡವರು ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಹಣ ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಹಣ ಕಳೆದುಕೊಂಡವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಬಡವರ ಹಣವನ್ನು ದೋಚಿದ ಮನ್ಸೂರ್ ಖಾನ್ ಬಂಧನ ಆಗಲೇಬೇಕು’, ‘ನಮ್ಮ ಹಣ ವಾಪಸ್‌ ಕೊಡಿಸಿ’, ‘ಕೂಲಿ ಮಾಡಿದ ಬಡವರ ಹಣವನ್ನು ವಾಪಸ್ ನೀಡಬೇಕು’, ‘ನಮ್ಮ ಹಣಕ್ಕೆ ನ್ಯಾಯ ಬೇಕು’, ‘ತನಿಖೆಯನ್ನು ತೀವ್ರಗೊಳಿಸಬೇಕು’ ಎಂದು ಘೋಷಣೆ ಕೂಗಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ದಾದಾಪಿರ್ ಅಸಾದುಲ್ಲಾನಿಗೆ ಹರಪನಹಳ್ಳಿ, ಲೋಕಿಕೆರೆ, ಬಿ.ಎಂ. ಲೇಔಟ್‌ಗಳಲ್ಲಿ ₹25 ಕೋಟಿಗೂ ಹೆಚ್ಚು ಬೆಲೆ ಬಾಳುವ ಬೇನಾಮಿ ಆಸ್ತಿ ಇದೆ. ಎರಡು ವರ್ಷಗಳ ಹಿಂದೆ ಈತನ ಬಳಿ ಏನು ಇರಲಿಲ್ಲ. ಈಗ ಇವನ ಕುಟುಂಬದವರ ಬಳಿ ಕೆಜಿಗಟ್ಟಲೆ ಚಿನ್ನ ಆಸ್ತಿ, ಬಂಗಲೆ, ಇಂಟರ್‌ ನ್ಯಾಷನಲ್ ಸ್ಕೂಲ್‌ಗಳು ಇವೆ. ಇದು ಹೇಗೆ ಬಂತು ಎಂದು ತನಿಖೆ ಮಾಡಬೇಕು’ ಎಂದು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್‌ ಆಗ್ರಹಿಸಿದರು.

ADVERTISEMENT

‘ಮಕ್ಕಳ ಭವಿಷ್ಯಕ್ಕಾಗಿ ₹ 8ಲಕ್ಷ ಹೂಡಿಕೆ ಮಾಡಿದ್ದೆ. 6 ತಿಂಗಳ ಆಯಿತು. ಈಗ ಹಣ ಇಲ್ಲದಂತಾಗಿದೆ. ನಮ್ಮ ಹಣ ವಾಪಸ್ ಬರಬೇಕು, ತ್ವರಿತಗತಿಯಲ್ಲಿ ತನಿಖೆ ನಡೆಯಬೇಕು. ನಮ್ಮ ಕಷ್ಟಗಳಿಗೆ ಸರ್ಕಾರ, ಪೊಲೀಸರು ಸ್ಪಂದಿಸಿದ್ದಾರೆ’ ಎಂದು ಹಣ ಕಳೆದುಕೊಂಡಿರುವ ಮಿರ್ಜಾ ಕಲೀಂಉಲ್ಲಾ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ‘ಬಂಧಿತನಾಗಿರುವ ದಾದಾಪೀರ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅಲ್ಲದೇ ಆಸ್ತಿಯನ್ನು ಮಾರಾಟ ಮಾಡದಂತೆ ಕ್ರಮ ವಹಿಸಲಾಗುವುದು. ಸರ್ಕಾರ, ನ್ಯಾಯಾಲಯ ಏನು ಕ್ರಮ ಕೈಗೊಳ್ಳುತ್ತದೆಯೊ ಅದರಂತೆ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತನ್ವೀರ್ ಅಹಮದ್, ಉಮೇಶ್ ಪಾಟೀಲ್, ಅಬೀಬ್ ಸೇರಿ 50ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.