ದಾವಣಗೆರೆ: ಬಿಸಿಯೂಟ ತಯಾರಕರಿಗೆ ಲಾಕ್ಡೌನ್ ಅವಧಿಯದ್ದೂ ಸೇರಿ ನಾಲ್ಕು ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ‘ ಸರ್ಕಾರ ದುಡಿಯುವ ಮಹಿಳೆಯರನ್ನು ಕಡೆಗಣಿಸಿದ್ದು, ಮುಖ್ಯ ಅಡುಗೆಯವರು ₹2,700 ಹಾಗೂ ಸಹಾಯಕ ಅಡುಗೆಯವರು ₹2,600 ಗೌರವ ಸಂಭಾವನೆ ಪಡೆಯುತ್ತಿದ್ದಾರೆ. ಇದರಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಘೇರಾವ್ ಹಾಕುತ್ತೇವೆ’ ಎಂದು ಎಚ್ಚರಿಸಿದರು.
ಬಿಸಿಯೂಟ ತಯಾರಕರನ್ನು ಕಾಯಂಗೊಳಿಸಬೇಕು. ಇಎಸ್ಐ, ಪಿಎಫ್, ನಿವೃತ್ತಿ ವೇತನ, ಇಡುಗಂಟು ಹಣ, ಅಪಘಾತ ಪರಿಹಾರ ವಿಮೆ, ಮರಣ ಪರಿಹಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಡಿಸಿ ‘ನಿಮ್ಮ ಜೊತೆ ನಾವಿದ್ದೇವೆ’ ಎಂದು ಭರವಸೆ ನೀಡಿದರು.
ಕಾರ್ಮಿಕ ಮುಖಂಡರಾದ ಆವರಗೆರೆ ವಾಸು, ಆವರಗೆರೆ ಚಂದ್ರು, ಬೆಳಲಗೆರೆ ರುದ್ರಮ್ಮ, ಜ್ಯೋತಿ ಲಕ್ಷ್ಮಿ, ಮಳಲಕೆರೆ ಜಯಮ್ಮ,, ಲಕ್ಷ್ಮಿ, ಮಹಮ್ಮದ್ ಬಾಷಾ, ಜ್ಯೋತಿಲಕ್ಷ್ಮಿ, ಪ್ರಮೀಳಾ, ಸರೋಜಾ, ಮಂಗಳಗೌರಿ, ಜಯಮ್ಮ, ವನಜಾಕ್ಷಿ, ಅರುಣ, ರಾಧಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.