ದಾವಣಗೆರೆ: ಹಸಿರು ಪಟಾಕಿ ನಿಯಮ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡುತ್ತಿದ್ದ 48 ಮಳಿಗೆಗಳಿಗೆ ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು. ₹ 50 ಸಾವಿರಕ್ಕೂ ಅಧಿಕ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡರು.
ಪಟಾಕಿ ಮಳಿಗೆ ಹಾಕಲು ಅನುಮತಿ ನೀಡುವಾಗ ಯಾವ ಪಟಾಕಿಗಳನ್ನು ಮಾರಾಟ ಮಾಡಬೇಕು ಎಂದು ಷರತ್ತುಗಳನ್ನು ಹಾಕಲಾಗಿತ್ತು. ಅದರ ಪ್ರಕಾರ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗಳಿಂದ ದೃಢೀಕೃತ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ನಿಯಮ ಉಲ್ಲಂಘಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದರು.
ವಶಪಡಿಸಿಕೊಳ್ಳಲಾದ ಪಟಾಕಿಯನ್ನು ಪಾಲಿಕೆಯ ಕಸ ಸಾಗಾಟದ ವಾಹನದಲ್ಲಿ ಒಯ್ದು ಮಹಜರು ಮಾಡಲಾಯಿತು.
ಪಾಲಿಕೆಯ ಪರಿಸರ ಎಂಜಿನಿಯರ್ಗಳಾದ ಸುನಿಲ್ ಜಿ.ಎಂ., ಬಸವಣ್ಣ, ಆರೋಗ್ಯ ನಿರೀಕ್ಷಕಿ ಮಧುಶ್ರೀ, ಸಹಾಯಕರಾದ ಲೋಕೇಶ್, ಹುಸೇನ್ ಮತ್ತು ತಂಡ ಕಾರ್ಯಾಚರಣೆ ನಡೆಸಿದರು. ಡಿವೈಎಸ್ಪಿ ನಾಗೇಶ್ ಐತಾಳ್, ಇನ್ಸ್ಪೆಕ್ಟರ್ ಗುರುಬಸವರಾಜ್, ಎಸ್ಐಗಳಾದ ಸಂಜೀವ್ಕುಮಾರ್, ರೂಪಾ ತೆಂಬದ, ವೀರೇಶ್ ಕುಮಾರ್, ಕಿರಣ್ಕುಮಾರ್ ಮತ್ತು ಸಿಬ್ಬಂದಿ ಭದ್ರತೆ ಒದಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.