ADVERTISEMENT

ಹರಪನಹಳ್ಳಿ: ಕೃಷಿ ಹೊಂಡಕ್ಕೆ ನೀರು- ಸಸಿ ನೆಟ್ಟು ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 3:31 IST
Last Updated 14 ಜುಲೈ 2021, 3:31 IST
ಹರಪನಹಳ್ಳಿ ತಾಲ್ಲೂಕು ಬಾಗಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕರು ಕೃಷಿ ಹೊಂಡದ ಸುತ್ತ ಸಸಿ ನೆಟ್ಟು ಸಂಭ್ರಮಿಸಿದರು.
ಹರಪನಹಳ್ಳಿ ತಾಲ್ಲೂಕು ಬಾಗಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕರು ಕೃಷಿ ಹೊಂಡದ ಸುತ್ತ ಸಸಿ ನೆಟ್ಟು ಸಂಭ್ರಮಿಸಿದರು.   

ಹರಪನಹಳ್ಳಿ: ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡ ಭರ್ತಿಯಾಗಿದ್ದರಿಂದ ಗ್ರಾಮದ ಯುವಕರು ಒಂದೇ ಬಣ್ಣದ ಟೀಶರ್ಟ್ ಧರಿಸಿ ಗಂಗಾಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದರು.

ಗ್ರಾಮದ ಎನ್. ಸಿದ್ದಲಿಂಗಪ್ಪ ಅವರ ಜಮೀನಿನಲ್ಲಿ ಕಳೆದ ತಿಂಗಳು ಕೃಷಿ ಹೊಂಡ ನಿರ್ಮಾಣ ಮಾಡಿದ್ದರು. ಹೆಚ್ಚಿನ ಮಳೆ ಸುರಿದಿದ್ದರಿಂದ ಸೋಮವಾರ ಹೊಂಡದಲ್ಲಿ ಉತ್ತಮ ನೀರು ಸಂಗ್ರಹವಾಗಿತ್ತು. ಇದರಿಂದ ಖುಷಿಗೊಂಡ ರೈತರು, ಜಮೀನಿಗೆ ತೆರಳಿ, ಹೊಂಡದ ಸುತ್ತಲೂ ಗಿಡಗಳನ್ನು ನೆಟ್ಟು ಪೂಜೆ ನೆರವೇರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಕೃಷಿ ಸಹಾಯಕ ಉತ್ತಂಗಿ ಮಂಜುನಾಥ್ ಮಾತನಾಡಿ, ‘ರೈತರು ವೈಜ್ಞಾನಿಕ ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಹೊಂಡದಲ್ಲಿ ಸಂಗ್ರಹವಾಗುವ ನೀರನ್ನು ಮಳೆ ಕೊರತೆ ಆದಾಗ ಪಂಪ್‌ಸೆಟ್‌ ಬಳಸಿ ಬೆಳೆಗೆ ಹರಿಸಲು ಸಹಕಾರಿ ಆಗುತ್ತದೆ. ಇದರಿಂದ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಬಹುದು’ ಎಂದರು.

ADVERTISEMENT

ರೈತ ಎನ್.ಜಿ. ಸಿದ್ದೇಶ್ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಂದಲೇ ಕೃಷಿ ಹೊಂಡ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎನ್.ಮಂಜುನಾಥ್, ಬಣಕಾರ ಜಗದೀಶ್, ಎಚ್.ದ್ವಾರಕೀಶ್, ಎನ್. ಕೊಟ್ರೇಶ್, ಸಿದ್ದಲಿಂಗಪ್ಪ, ಟಿ.ಎಸ್. ಕರಿಯಪ್ಪ, ಅಂಜಿನಪ್ಪ, ಹಾಲೇಶ್, ಎಚ್.ಬಿ. ಮಂಜುನಾಥ್, ನಿರಂಜನ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.