ಹರಿಹರ: ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ರಾಜನಹಳ್ಳಿಯಿಂದ ಬಿಳಸನೂರು (ರಾಷ್ಟ್ರೀಯ ಹೆದ್ದಾರಿ- ಕೋಣನತಲೆ ರಸ್ತೆಯ ಭಾಗ) ಮಾರ್ಗದಲ್ಲಿ ಡಾಂಬರು ಕಿತ್ತು ಹೋಗಿ, ಸಂಪೂರ್ಣ ಗುಂಡಿಮಯವಾಗಿದೆ. ಇಲ್ಲಿ ವಾಹನಗಳ ಸಂಚಾರವೇ ದುಸ್ತರವಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಆರಂಭವಾಗುವ ಈ ರಸ್ತೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವರೆಗೆ 11 ಮೀ. ಅಗಲದ ಸಿ.ಸಿ. ರಸ್ತೆಯಾಗಿ ಅಭಿವೃದ್ಧಿ ಹೊಂದಿದೆ. ನಂತರದ ಬಿಳಸನೂರು ಗ್ರಾಮದವರೆಗಿನ ರಸ್ತೆ ಈಗಲೂ 3.75 ಮೀಟರ್ ಅಗಲವಿದ್ದು, ಹಲವು ವರ್ಷಗಳ ಹಿಂದೆಯೇ ಡಾಂಬರು ಕಿತ್ತು ಹೋಗಿದೆ.
ಈ ರಸ್ತೆಯಲ್ಲಿ 2 ಕಿ.ಮೀ.ವರೆಗೆ ಗುಂಡಿಮಯವಾಗಿದೆ. ಗುಂಡಿಗಳು ದೊಡ್ಡ ಗಾತ್ರದಲ್ಲಿ ಇರುವುದರಿಂದ ಬೈಕ್, ಕಾರು ಒತ್ತಟ್ಟಿಗಿರಲಿ ದೊಡ್ಡ ವಾಹನಗಳಾದ ಬಸ್, ಲಾರಿಗಳು ಸಂಚರಿಸುವುದೇ ದೊಡ್ಡ ಸವಾಲಾಗಿದೆ.
ಈಗ ಮಳೆ ಸುರಿಯುತ್ತಿರುವುದರಿಂದ ಗುಂಡಿಗಳಲ್ಲಿ ನೀರು ತುಂಬಿದ್ದು, ಸಂಚಾರ ಮತ್ತಷ್ಟು ಕ್ಲಿಷ್ಟಕರವಾಗಿದೆ. ಈ ಭಾಗದ ಜನರು ಬೈಕ್, ಕಾರ್ಗಳಲ್ಲಿ ಓಡಾಡುವ ತಮ್ಮ ಕುಟುಂಬದ ಸದಸ್ಯರು ಮನೆಗೆ ತಲುಪುವವರೆಗೂ ಆತಂಕದಲ್ಲಿರುವಂತೆ ಮಾಡಿದೆ.
ಇದೇ ಪ್ರಮುಖ ರಸ್ತೆ:
ಈ ಭಾಗದ ಗ್ರಾಮಗಳಾದ ಬಿಳಸನೂರು, ತಿಮ್ಲಾಪುರ, ಎರೆಹೊಸಳ್ಳಿ, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ವಾಸನ, ಕಮಲಾಪುರ, ನಂದಿಗುಡಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ತಾಲ್ಲೂಕು ಕೇಂದ್ರ ಹರಿಹರಕ್ಕೆ ಬಂದು ಹೋಗಲು ಇದೇ ಹತ್ತಿರದ ರಸ್ತೆಯಾಗಿದೆ.
ಮರಳಿನ ಲಾರಿ ಸಂಚಾರ:
ವಿದ್ಯಾರ್ಥಿಗಳು, ನೌಕರರು, ರೈತರು, ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ನದಿ ದಡದ ಗ್ರಾಮಗಳಿಂದ ಮರಳು, ರೈತರ ಉತ್ಪನ್ನ ಸಾಗಣೆಗೂ ಈ ರಸ್ತೆಯೇ ಆಧಾರವಾಗಿದೆ. ಹೀಗಾಗಿ ಗುಂಡಿಗಳಿಗೆ ಗ್ರಾವೆಲ್ ಹಾಕಿದರೆ ಸಾಲದು, ರಸ್ತೆಯನ್ನು ವಿಸ್ತರಿಸಿ ಉತ್ತಮ ಗುಣಮಟ್ಟದ ಡಾಂಬರು ಹಾಕಬೇಕಿದೆ. ಇಲ್ಲವೇ ಸಿ.ಸಿ. ರಸ್ತೆ ಮಾಡುವುದೇ ಸಮಸ್ಯೆಗೆ ಪರಿಹಾರವಾಗಿದೆ ಎಂಬುದು ಸಾರ್ವಜನಿಕರ ಸಲಹೆಯಾಗಿದೆ.
ಹಲವು ವರ್ಷಗಳ ಹಿಂದೆಯೇ ರಸ್ತೆ ಹಾಳಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲತಾಟೇರ್ ಬಾಬು ರೆಡ್ಡಿ, ಬಿಳಸನೂರು ನಿವಾಸಿ
ತಳಮಟ್ಟದಲ್ಲಿರುವ ಈ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕಿದೆ. ವಿಭಾಗೀಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಂದರೆ ಕಾಮಗಾರಿ ಆರಂಭಿಸುತ್ತೇವೆ.ಮರಿಸ್ವಾಮಿ, ಎಇಇ, ಪಿಡಬ್ಲ್ಯೂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.