ADVERTISEMENT

ಜಿಂದಾಲ್‌ಗೆ ಜಮೀನು ಮಾರಾಟ | ಸಚಿವ ಸಂಪುಟ ಶಾಮೀಲು: ಬಸವರಾಜ ಬೊಮ್ಮಾಯಿ ಆರೋಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 16:25 IST
Last Updated 23 ಆಗಸ್ಟ್ 2024, 16:25 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹರಿಹರ: ಜಿಂದಾಲ್ ಉಕ್ಕು ಕಂಪೆನಿಗೆ ಕಡಿಮೆ ದರದಲ್ಲಿ 3,677 ಎಕರೆ ಜಮೀನು ಮಾರಿರುವ ಪ್ರಕರಣದಲ್ಲಿ ಅಧಿಕಾರಿಗಳ ಜತೆಗೆ ರಾಜ್ಯ ಸಚಿವ ಸಂಪುಟವೇ ಶಾಮೀಲಾಗಿದೆ ಎಂದು ಹಾವೇರಿ– ಗದಗ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶುಕ್ರವಾರ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತದ ಅವಧಿಯಲ್ಲಿ ಈ ಪ್ರಸ್ತಾವನೆಗೆ ತಡೆ ನೀಡಲಾಗಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರ ತರಾತುರಿಯಲ್ಲಿ ಹಸಿರು ನಿಶಾನೆ ತೋರಿದೆ ಎಂದು ದೂರಿದರು.

‘ಅದಿರಿನ ನಿಕ್ಷೇಪ ಇರುವ ಬೆಲೆಬಾಳುವ ಜಮೀನನ್ನು ಅತ್ಯಂತ ಕಡಿಮೆ ದರದಲ್ಲಿ ‘ಲೀಸ್ ಕಂ ಸೇಲ್’ ಆಧಾರದಲ್ಲಿ ನೀಡುವಲ್ಲಿ ಷಡ್ಯಂತ್ರ ನಡೆದಿದೆ. ಅಧಿಕಾರಕ್ಕೆ ಬಂದ ಬಳಿಕ ಪ್ರಸ್ತಾವನೆಗೆ ಕಾಂಗ್ರೆಸ್ ಸುಲಭವಾಗಿ ಅನುಮೋದನೆ ನೀಡಿದ್ದು ಹೇಗೆ?’ ಎಂದು ಪ್ರಶ್ನಿಸಿದರು.

ADVERTISEMENT

ಸರ್ಕಾರಕ್ಕೆ ಆಗುತ್ತಿರುವ ದೊಡ್ಡ ನಷ್ಟವನ್ನು ತಡೆಯಲು ಈಗಿನ ಮಾರುಕಟ್ಟೆ ದರಕ್ಕೆ ಜಮೀನು ಮಾರಾಟ ಆಗಬೇಕು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅದಾನಿ, ಅಂಬಾನಿ ಹೆಸರು ಹೇಳಿ ಟೀಕಿಸುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಏನು ಮಾಡುತ್ತಿದೆ? ಎಂದು ಅವರು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪಿತ ರಾಜಕಾರಣಿಗಳನ್ನು ಕೈಬಿಡುವ ಉದ್ದೇಶದಿಂದ ಎಸ್‌ಐಟಿಯಿಂದ ತರಾತುರಿಯಲ್ಲಿ ರಾಜ್ಯ ಸರ್ಕಾರ ವಿಚಾರಣೆ ಆರಂಭಿಸಿತ್ತು. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಮರಣಪತ್ರ ಆಧರಿಸಿ ಕೇಂದ್ರ ಸರ್ಕಾರ ತನಿಖೆಗೆ ಮುಂದಾಗಲಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.