ADVERTISEMENT

ಸಂತೇಬೆನ್ನೂರು| ಮಾವು: ಮೈದುಂಬಿದ ಹೂವು..ಕೀಟಬಾಧೆಯ ನೋವು...

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:51 IST
Last Updated 7 ಫೆಬ್ರುವರಿ 2026, 2:51 IST
ಸಂತೇಬೆನ್ನೂರು ಸಮೀಪದ ತೋಟದಲ್ಲಿ ಹೂದುಂಬಿದ ಮಾವಿನ ಮರ
ಸಂತೇಬೆನ್ನೂರು ಸಮೀಪದ ತೋಟದಲ್ಲಿ ಹೂದುಂಬಿದ ಮಾವಿನ ಮರ   

ಸಂತೇಬೆನ್ನೂರು: ಜಿಲ್ಲೆಯ ಮಾವಿನ ಕಣಜ ಎಂದೇ ಗುರುತಿಸಿಕೊಂಡಿರುವ ಹೋಬಳಿಯ ಬಹುತೇಕ ಮಾವಿನ ತೋಪುಗಳಲ್ಲಿ ಹೂ-ಗೊಂಚಲು ಮೈದುಂಬಿದ್ದು, ಭರ್ಜರಿ ನಿರೀಕ್ಷೆ ಮೂಡಿಸಿದೆ.

ಇದು ಹೂಗಳು ಈಚಾಗಿ ಪರಿವರ್ತನೆಯಾಗುವ ಕಾಲ. ಇದಕ್ಕೆ ಮುಂದಿನ ಎರಡು ವಾರ ಸ್ಥಿರ ಹವಾಮಾನ ಅಗತ್ಯ. ಹೀಗಾದರೆ ಉತ್ತಮ ಇಳುವರಿ ಖಚಿತ. ಈಗಾಗಲೇ ಮಾವು ಬೆಳೆಗಾರರು ಹಾಗೂ ಗೇಣಿದಾರರು ಹೂಗೊಂಚಲಿಗೆ ಸೂಕ್ಷ್ಮಾಣು ಜೀವಿಗಳಿಂದ ಅಂಟು ಬೀಳದಂತೆ ತಡೆಯಲು ಒಂದೆರಡು ಬಾರಿ ಔಷಧಿ ಸಿಂಪಡಿಸಿದ್ದಾರೆ.

ಕಳೆದ ಆರೇಳು ವರ್ಷಗಳಿಂದ ಹವಾಮಾನ ಬದಲಾವಣೆಯಿಂದ ಇಳುವರಿ ತೀವ್ರ ಕುಸಿದಿದೆ. ಹೂವಿನ ಹಂತದಲ್ಲಿ ಮುಂಜಾನೆ ಬೀಳುವ ಮಂಜು ಹಾನಿಕಾರಕ. ರೋಗ ಉಲ್ಬಣಿಸಿ ಅಂಟಿನಂಥ ದ್ರವ ಒಸರಿ ಹೂ ಒಣಗುತ್ತದೆ. ಕೆಲವೊಮ್ಮೆ ಔಷಧಿಗಳಿಗೂ ನೆರವಿಗೆ ಬರುವುದಿಲ್ಲ. ಹವಾಮಾನವೇ ಮಾವಿನ ಇಳುವರಿ ಹಾಗೂ ಗುಣಮಟ್ಟವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ಮಾವು ಬೆಳೆಗಾರ ಪ್ರಸನ್ನ.

ADVERTISEMENT

ಉತ್ಕೃಷ್ಟ, ರುಚಿಕರ ತಳಿಯ ಆಲ್ಫೋನ್ಸೊ, ರಸಪುರಿ, ಸಿಂಧೂರ, ಬೆನಿಶ್ ತಳಿಯ ಮಾವನ್ನು ಈ ಭಾಗದಲ್ಲಿ ಬೆಳೆಯಲಾಗುತ್ತಿದೆ. ತೊತಾಪುರಿ, ಮಲ್ಲಿಕಾ, ನೀಲಂ ಅಲ್ಪ ಪ್ರಮಾಣದಲ್ಲಿವೆ. ಈ ಭಾಗದಲ್ಲಿ ಹಿಂದೆ 2,000 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದ್ದ ಮಾವು ಈಗ 774 ಹೆಕ್ಟೇರ್‌ಗೆ ಕುಸಿದಿದೆ. ಅಸ್ಥಿರ ಹವಾಮಾನ, ರೋಗ ಬಾಧೆ, ಬೆಲೆ ಕುಸಿತದಿಂದ ಬೇಸತ್ತು ಅಡಿಕೆ ಹಾಗೂ ಮಳೆಯಾಶ್ರಿತ ಬೆಳೆಗಳಿಗೆ  ಪರಿವರ್ತನೆಗೊಂಡಿದ್ದೇವೆ ಎನ್ನುತ್ತಾರೆ ರೈತರಾದ ಫಾಲಾಕ್ಷಪ್ಪ, ರಾಜಪ್ಪ.

ಮಾವು ಬೆಳೆಗೆ ಕೀಟಬಾಧೆ

(ವರದಿ: ನಟರಾಜ್ ಎಚ್.ವಿ.)

ಚನ್ನಗಿರಿ: ತಾಲ್ಲೂಕಿನ ಸಂತೇಬೆನ್ನೂರು ಬಸವಾಪಟ್ಟಣ ಕಸಬಾ ತಾವರೆಕೆರೆ ಹೋಬಳಿ ಹಾಗೂ ಚನ್ನಗಿರಿ ಪಟ್ಟಣದ ವ್ಯಾಪ್ತಿಯ 7773 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ದಶಕದ ಹಿಂದೆ 25000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದ ರೈತರು ಅಡಿಕೆಯತ್ತ ಹೊರಳಿದ್ದಾರೆ.  ಮಾವಿಗೆ ಅಲ್ಲಲ್ಲಿ ರೋಗಬಾಧೆ ಹಾಗೂ ಕೀಟಬಾಧೆ ಕಂಡು ಬಂದಿದೆ. ಮಾವಿನ ಮರಗಳಲ್ಲಿ ಹೂವು ಹೀಚು ಬಿಡಲು ಆರಂಭಿಸಿದ್ದು ಈ ಅವಧಿಯಲ್ಲಿ ಮುಖ್ಯವಾಗಿ ಜಿಗಿಹುಳು ಥ್ರಿಪ್ಸ್ ಮೈಟ್ಸ್ ಹೂವು ತೆನೆ ಕ್ಯಾಟರ್ ಕೀಟಗಳು ಬಾಧಿಸುತ್ತವೆ. ಹತೋಟಿಗಾಗಿ ಮೆಲಾಥಿಯನ್ 50 ಇಸಿ 2 ಮಿಲಿಲೀಟರ್ ಔಷಧಿಯನ್ನು 1 ಲೀಟರ್ ನೀರಿಗೆ ಮಿಶ್ರಣ ಮಾಡಿ ಮಾವಿನ ಮರಗಳಿಗೆ ಸಿಂಪರಣೆ ಮಾಡಬೇಕು ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದ್ದಾರೆ. ಹೂವು ಒಣಗುವ ಹಾಗೂ ಕಪ್ಪಾಗುವ ರೋಗ ಎಲೆಸಿಬ್ಬು ಬೂದಿ ಮತ್ತು ಕಾಡಿಗೆ ರೋಗಗಳು ಪ್ರಮುಖವಾಗಿ ಕಾಡುತ್ತದೆ. ಇವುಗಳ ನಿಯಂತ್ರಣಕ್ಕಾಗಿ ಕ್ಲೋರೋತಾಲೋನಿಲ್ 75 ಡಬ್ಲೋಪಿ 2 ಗ್ರಾಂ ಔಷಧಿ ಪುಡಿಯನ್ನು 1 ಲೀಟರ್ ನೀರಿಗೆ ಮಿಶ್ರಣ ಮಾಡಿ ಮರಗಳಿಗೆ ಸಿಂಪರಿಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ತೋಟಗಾರಿಕಾ ಇಲಾಖೆ ಕಚೇರಿಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.

ತೊತಾಪುರಿಗೆ ಬೇಡಿಕೆ

ಈಗಾಗಲೇ ಕೆಲ ತೋಟಗಳಲ್ಲಿ ತೊತಾಪುರಿ ಮಾವಿನ ಕಾಯಿಯನ್ನು ಎಳೆವೆಯಲ್ಲೇ ಕಿತ್ತು ಮಾರಾಟ ಮಾಡಲಾಗುತ್ತಿದೆ. ಉಪ್ಪಿನ ಕಾಯಿ ಕಂಪನಿಗಳಿಂದ ಬೇಡಿಕೆ ಹೆಚ್ಚಿದ ಕಾರಣ ಉತ್ತಮ ಧಾರಣೆ ಸಿಗುತ್ತಿದೆ. ತೊತಾಪುರಿ ಕಾಯಿಗಳನ್ನು ಹೊರ ರಾಜ್ಯಗಳಿಗೆ ಕಳಿಸಲಾಗುತ್ತಿದೆ ಎನ್ನುತ್ತಾರೆ ಮಾರಾಟಗಾರ ಆಸೀಫ್.

ಚನ್ನಗಿರಿ ಪಟ್ಟಣದ ಹೊರವಲಯದಲ್ಲಿ ಮೈತುಂಬಾ ಹೂವು ಬಿಟ್ಟು ಕಂಗೊಳಿಸುತ್ತಿರುವ ಮಾಮರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.