ಚನ್ನಗಿರಿ ತಾಲ್ಲೂಕು ಬುಳುಸಾಗರದ ಬಳಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪೈಪ್ ಒಡೆದು ನೀರು ಕಾರಂಜಿಯಂತೆ ಜಿಗಿಯುತ್ತಿದೆ
ಬುಳುಸಾಗರ (ಚನ್ನಗಿರಿ): ತಾಲ್ಲೂಕಿನ ಬುಳುಸಾಗರದ ಬಳಿ ಹಾದು ಹೋಗಿರುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಅಳವಡಿಸಿರುವ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.
ಪೈಪ್ ಒಡೆದು ಮೂರು ದಿನವಾಗಿದ್ದು ನಿರಂತರವಾಗಿ ನೀರು ಕಾರಂಜಿಯಂತೆ ಹೊರಹೊಮ್ಮಿ ಅಕ್ಕಪಕ್ಕದ ತೋಟಗಳಿಗೆ ಹೋಗುತ್ತಿದೆ. ಸಂಜೆಯವರೆಗೂ ಕೂಡಾ ಸಂಬಂಧಪಟ್ಟ ಇಲಾಖೆಯವರು ಒಡೆದು ಹೋಗಿರುವ ಪೈಪ್ನ್ನು ದುರಸ್ತಿ ಮಾಡದ್ದರಿಂದ ಯಥೇಚ್ಛ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ.
80ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, 2018ರಲ್ಲಿ ಆರಂಭವಾದ ಕಾಮಗಾರಿ ಈ ಮುಗಿದು ಪ್ರಾಯೋಗಿಕ ಪರೀಕ್ಷೆ ಕಾರ್ಯ ನಡೆದಿದ್ದು, ಮೊದಲ ಹಂತದಲ್ಲಿಯೇ ಪೈಪ್ ಒಡೆದು ಹೋಗಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.
2018ರಲ್ಲಿ ಶಾಸಕ ವಡ್ನಾಳ್ ರಾಜಣ್ಣ ಅವರು ₹ 461 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ನಂತರ 2022ರಲ್ಲಿ ಸಾಲಿನಲ್ಲಿ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೆಚ್ಚುವರಿ ಕಾಮಗಾರಿಗೆ ₹ 165 ಕೋಟಿ ಬಿಡುಗಡೆ ಮಾಡಿಸಿದ್ದರು. ಈಗಿನ ಶಾಸಕ ಬಸವರಾಜು ವಿ. ಶಿವಗಂಗಾ ಕ್ಷೇತ್ರದಲ್ಲಿ ಬಾಕಿ ಉಳಿದಿರುವ 50ಕ್ಕಿಂತ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ₹ 365 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ. ಇಷ್ಟು ಹಣ ಖರ್ಚಾದರೂ ಕೆರೆಗಳಿಗೆ ಸಮರ್ಪಕವಾಗಿ ಇನ್ನೂ ನೀರು ತುಂಬುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯ ಕಚೇರಿ ದಾವಣಗೆರೆಯಲ್ಲಿದ್ದು, ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಲು ಅಧಿಕಾರಿಗಳ ಮೊಬೈಲ್ ನಂಬರು ಕೂಡಾ ಇರುವುದಿಲ್ಲ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪೈಪ್ನ್ನು ದುರಸ್ತಿ ಮಾಡಿ ನೀರು ಹರಿಯುವುದನ್ನು ನಿಲ್ಲಿಸಬೇಕು ಎಂದು ಬುಳುಸಾಗರದ ಸಿದ್ಧರಾಮಪ್ಪ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.