
ಜಗಳೂರು: ಉತ್ತರಾಖಂಡ ರಾಜ್ಯದ ಕೇದಾರ ಪೀಠದ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಭಕ್ತರು ಗುರುವಾರ ಅದ್ದೂರಿ ಸ್ವಾಗತ ನೀಡಿದರು.
ಕೇದಾರ ಪೀಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದು ಅನಿರೀಕ್ಷಿತ. 2012ರಲ್ಲಿ ನಡೆದ ಅನುಷ್ಠಾನ ಕಾರ್ಯಕ್ರಮದಲ್ಲಿ ಕೇದಾರ ಶ್ರೀಗಳ ಸೇವೆ ಮಾಡಿದ್ದೆ. ಅವರು ನನ್ನ ಧಾರ್ಮಿಕ ಸೇವೆ ಗುರುತಿಸಿ ನೇಮಿಸಿರುವುದು ನನ್ನ ಸೌಭಾಗ್ಯ ಎಂದು ಶಾಂತಲಿಂಗ ಶಿವಾಚಾರ್ಯ ಶ್ರೀ ಸಂತಸ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ಮಾಡಬೇಕು. ಫಲಾಫಲವನ್ನು ಭಗವಂತನಿಗೆ ಬಿಡಬೇಕು ಎಂದರು.
2006ರಲ್ಲಿ ಮಲೆನಾಡಿನಿಂದ ಬರದನಾಡಿಗೆ ಒಂದು ಕೆ.ಜಿ ಅಕ್ಕಿಯೂ ಇಲ್ಲದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಮಠಕ್ಕೆ ಬಂದೆ. ಮುಮ್ಮಡಿ ಶಾಂತಲಿಂಗ ಸ್ವಾಮೀಜಿ ಆಶೀರ್ವಾದದಿಂದ ನಾನು ಸಾಗುತ್ತೇನೆ. ಕಣ್ವಕುಪ್ಪೆ ಮಠವನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡಮುಣಗು ತಿಪ್ಪೇಸ್ವಾಮಿ, ಚಿತ್ರದುರ್ಗದ ವಿಜಾಪುರ ಬಸವರಾಜ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿ ಕುಮಾರ್, ಡಾ. ಹಾಲಸ್ವಾಮಿ ಕಂಬಾಳಿಮಠ, ಶರಣಪ್ಪ, ಬಸವರಾಜ್, ಪ್ರಕಾಶ್, ಜಯಣ್ಣ, ಮುರುಗೇಶ್, ರುದ್ರೇಶ್, ಎನ್.ಎಂ.ಲೋಕೇಶ್, ಶಿವಕುಮಾರ್ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.