ಉಕ್ಕಡಗಾತ್ರಿ(ಮಲೇಬೆನ್ನೂರು): ಭಕ್ತರು ಭಕ್ತಿಯಿಂದ ನೀಡುವ ಕಾಣಿಕೆ ಸಮರ್ಪಕವಾಗಿ ಬಳಕೆಯಾಗುತ್ತಿರುವುದು ಸುಕ್ಷೇತ್ರ ಧರ್ಮಕ್ಷೇತ್ರವಾಗಿ ಬೆಳೆಯುವುದಕ್ಕೆ ಮುಖ್ಯ ಕಾರಣ. ಕ್ಷೇತ್ರದ ಸ್ವಚ್ಛತೆ ಪಾವಿತ್ರ್ಯ ಕಾಪಾಡಿ ಎಂದು ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬುಧವಾರ ಅಭಿಪ್ರಾಯಪಟ್ಟರು.
ಸಮೀಪದ ಉಕ್ಕಡಗಾತ್ರಿಯ ಕರಿಬಸವೇಶ್ವರಸ್ವಾಮಿ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನೊಂದ ಮನಸ್ಸಿಗೆ ನೆಮ್ಮದಿ ನೀಡುವ ಭವ ರೋಗ ಪರಿಹರಿಸುವ ತಾಣ ಶಕ್ತಿ ಕೇಂದ್ರ. ಟ್ರಸ್ಟಿನ ನಿಸ್ವಾರ್ಥ ಸೇವಾ ಮನೋಭಾವ ಅನ್ನ, ಜ್ಞಾನ ದಾಸೋಹ, ಸಮಾಜಮುಖಿ ಸೇವೆ ನಿರಂತರವಾಗಿ ನಡೆಯಲು ಕಾರಣ, ಸ್ವಚ್ಛತೆಯಲ್ಲಿ ದೇವರನ್ನು ಕಾಣಿರಿ. ನದಿ ನೀರನ್ನು ಕಲುಷಿತಗೊಳಿಸಬೇಡಿ. ಸುಕ್ಷೇತ್ರದಲ್ಲಿ ಧರ್ಮಕಾರ್ಯ ನಿರಂತರವಾಗಿ ನಡೆಯಲಿ ಎಂದು ಉತ್ಸವಕ್ಕೆ ಶುಭ ಕೋರಿದರು.
ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್. ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ‘ಕೊವಿಡ್ ನಿಯಮದಂತೆ ಅಂತರ ಕಾಪಾಡಿ, ಸ್ವಚ್ಛತೆಗೆ ಒತ್ತು ನೀಡಿ’ ಎಂದು ಮನವಿ ಮಾಡಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ರಾಜಗೋಪುರದ ಬುನಾದಿ ಕೆಲಸ ಮುಗಿದಿದೆ. 3 ಕಿಲೋ ಬಂಗಾರದ ಕಿರೀಟ ಮಾಡಿಸುವ ಗುರಿಯಿದೆ. ಅಜ್ಜಯ್ಯನ ಭಾವಚಿತ್ರ, ತೊಯ್ದ ಬಟ್ಟೆ, ನಿಂಬೆಹಣ್ಣನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ನಾನಘಟ್ಟ ಸಮರ್ಪಕವಾಗಿ ಬಳಸಿ ಎಂದು ಭಕ್ತರಲ್ಲಿ ಮನವಿ ಮಾಡಿದರು.
ಎಎಸ್ಐ ಶ್ರೀನಿವಾಸ್ ಮಾತನಾಡಿ, ‘ಸಂಚಾರ ನಿಯಂತ್ರಣಕ್ಕೆ ಜಾತ್ರೆಗೆ ಬಂದ ಜನತೆ ಸಹಕರಿಸಿ, ವಾಹನ ನಿಲುಗಡೆ ಮಾಡುವ ಸ್ಥಳದಲ್ಲಿ ವಾಹನ ನಿಲ್ಲಿಸಿ. ಎಲ್ಲಂದೆರಲ್ಲಿ ಗುಟ್ಕಾ ಉಗಿಯಬೇಡಿ’ ಎಂದು ಭಕ್ತರಲ್ಲಿ ಮನವಿ ಮಾಡಿದರು.
ಮುಖಂಡರಾದ ಮೈಸೂರಿನ ಮಂಜೇಗೌಡ, ಪ್ರಕಾಶ್ ಕೋಟೇರ, ಕರಿಬಸಪ್ಪ ಹೊಟ್ಟೇರ, ಈರನಗೌಡ, ಗದ್ದಿಗೆಪ್ಪ ಹೊಸಳ್ಳಿ, ಗದ್ದಿಗೆಯ್ಯ ಪಾಟೀಲ ಬಸವರಾಜ್, ಚೊಗಚಿಕೊಪ್ಪ, ಹನುಮಗೌಡ ಶಿವಪೂಜಿ, ಶಿವಣ್ಣ ನಾಗರಾಜ್ ದಿಲ್ಲಿವಾಲಾ, ಬಸವನಗೌಡ ಪಾಳೇದ್, ಸಿದ್ದಲಿಂಗಪ್ಪ ಸಂಜೀವರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ದೇವಾಲಯದ ಅರ್ಚಕವೃಂದದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು.
ಶಿಕ್ಷಕರಾದ ಚಕ್ರಸಾಲಿ ಕಾರ್ಯಕ್ರಮ ನಿರೂಪಿಸಿದರು, ಎಸ್.ಬಿ. ಹಿತ್ತಲಮನಿ ಸ್ವಾಗತಿಸಿದರು, ವಿವೇಕಾನಂದ ವಂದಿಸಿದರು. ಪೊಲೀಸರು ಭದ್ರತೆ ಒದಗಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.