ದಾವಣಗೆರೆ: ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 3ರ ಒಳಗೆ ತೆರಳಬೇಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರು. ಹಾಗಾಗಿ ಕಾರ್ಯಕ್ರಮ ಮುಗಿಸಿ ಹೊರಡಬೇಕಿದ್ದ ಸಮಯಕ್ಕೆ ವೇದಿಕೆಗೆ ತಲುಪಿದರು.
ಮಂಗಳವಾರ ಹುಬ್ಬಳ್ಳಿಗೆ ಬಂದು ಉಳಿದುಕೊಂಡಿದ್ದ ರಾಹುಲ್ಗಾಂಧಿ ಬುಧವಾರ ಬೆಳಿಗ್ಗೆ ಚಿತ್ರದುರ್ಗಕ್ಕೆ ತೆರಳಿದ್ದರು. ಮುರುಘಾಮಠದಲ್ಲಿ ಶರಣರ ಜತೆಗೆ ಸಮಾಲೋಚನೆ ಮಾಡಿದ ಬಳಿಕ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಹೊರಟಿದ್ದರು. ಆದರೆ ಸಾವಿರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರ್ಯಕ್ರಮದ ಪ್ರದೇಶದಿಂದ ಸುಮಾರು 10 ಕಿಲೋಮೀಟರ್ ವರೆಗೆ ನಿಂತಿದ್ದರಿಂದ ಅವುಗಳ ನಡುವೆ ಬರಲು ಹರಸಾಹಸ ಪಡಬೇಕಾಯಿತು. ಮಧ್ಯಾಹ್ನ 12.30ಕ್ಕೆ ತಲುಪಬೇಕಿದ್ದ ರಾಹುಲ್ ಗಾಂಧಿ ಮಧ್ಯಾಹ್ನ 2.40ಕ್ಕೆ ತಲುಪಿದರು.
ರಾಹುಲ್ ಗಾಂಧಿ ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಸಹಿತ ಅನೇಕ ನಾಯಕರಿಗೂ ವಾಹನ ದಟ್ಟಣೆಯಿಂದ ಉಂಟಾದ ಅಡಚಣೆಯ ಬಿಸಿ ತಟ್ಟಿತು.
ಜನರು ವಾಹನಗಳನ್ನು ದೂರದಲ್ಲಿ ಇಟ್ಟು 10 ಕಿಲೋಮೀಟರ್ಗೂ ಅಧಿಕ ದೂರದಿಂದ ನಡೆದುಕೊಂಡು ಬಂದರು. ಕೆಲವರು 5, 6 ಕಿಲೋಮೀಟರ್ ದೂರದಿಂದ ನಡೆಯಬೇಕಾಯಿತು.
ಇದನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.