ADVERTISEMENT

ಭದ್ರಾ ಮೇಲ್ದಂಡೆ ಹಿನ್ನೆಡೆಯಿಂದ ರೈತರಿಗೆ ಸಂಕಷ್ಟ: ಉಜ್ಜಯಿನಿ ಶ್ರೀ ಬೇಸರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 15:55 IST
Last Updated 27 ಆಗಸ್ಟ್ 2024, 15:55 IST
ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠದ ಶ್ರೀ, ಶಾಸಕ. ಬಿ. ದೇವೇಂದ್ರಪ್ಪ ಪಾಲ್ಗೊಂಡಿದ್ದರು
ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠದ ಶ್ರೀ, ಶಾಸಕ. ಬಿ. ದೇವೇಂದ್ರಪ್ಪ ಪಾಲ್ಗೊಂಡಿದ್ದರು   

ಜಗಳೂರು: ಅಂತರ್ಜಲ ವೃದ್ಧಿಗಾಗಿ ನಮ್ಮ ಪೂರ್ವಜರು ನಿರ್ಮಿಸಿದ ಕೆರೆ, ಕಟ್ಟೆಗಳನ್ನು ಒತ್ತುವರಿ ಮಾಡುವ, ಕಬಳಿಸುವ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗಡಿಮಾಕುಂಟೆ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

‘ದುರಾಸೆಯಿಂದ ಕೆರೆಗಳನ್ನು ಒತ್ತುವರಿ ಮಾಡುವ ಪ್ರವೃತ್ತಿ ವ್ಯಾಪಕವಾಗಿದೆ. ಕೂಡಲೇ ಜಾಗೃತರಾಗಿ ಜಲ ಮೂಲಗಳನ್ನು ಸಂರಕ್ಷಿಸಿ ಉಳಿಸಬೇಕಾದ ಹೊಣೆ ಎಲ್ಲರ ಮೇಲಿದೆ. ಬಹುತೇಕ ದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ನೀರು ಸಕಲ ಜೀವರಾಶಿಗಳಿಗೂ ಅತ್ಯವಶ್ಯಕ. ದಶಕಗಳ ಕನಸಿನ ಭದ್ರಾ ಮೇಲ್ದಂಡೆ ಯೋಜನೆ ಸಕಾಲದಲ್ಲಿ ಸಾಕಾರಗೊಳ್ಳದ್ದರಿಂದ ರೈತರು ವಂಚಿತರಾಗುತ್ತಿರುವುದು ಬೇಸರದ ಸಂಗತಿ’ ಎಂದರು.

ADVERTISEMENT

ಬರದ ತಾಲ್ಲೂಕಿನಲ್ಲಿ ಈ ಬಾರಿ ಕೆರೆ ಕಟ್ಟೆಗಳು ಮೈದುಬಿವೆ. ಸಿರಿಗೆರೆ ಶ್ರೀಗಳ ಸಂಕಲ್ಪದಿಂದ ತಾಲ್ಲೂಕಿಗೆ 57 ಕೆರೆ ತುಂಬಿಸುವ ಯೋಜನೆಯಡಿ ನೀರು ಹರಿದು ಬರುತ್ತಿದೆ. ತಾಲ್ಲೂಕಿನ ಅತಿದೊಡ್ಡ ಕೆರೆಗಳಲ್ಲೊಂದಾಗಿರುವ, ನಾಡಿನ ದಕ್ಷ ಆಡಳಿತಗಾರರಾಗಿದ್ದ ದಿವಂಗತ ಇಮಾಂ ಸಾಹೇಬರು ನಿರ್ಮಿಸಿದ ಗಡಿಮಾಕುಂಟೆ ಕೆರೆಗೆ 57 ಕೆರೆ ತುಂಬಿಸುವ ಯೋಜನೆಯಡಿ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಯುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಮೂವರು ಮುಖ್ಯಮಂತ್ರಿಗಳು, ಮೂವರು ಶಾಸಕರ ಪಕ್ಷಾತೀತ ಕಾಳಜಿಯಿಂದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡು ತಾಲ್ಲೂಕಿನ ಕೆರೆಗಳಿಗೆ ನೀರು ಬಂದಿವೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಕಾಂಗ್ರೆಸ್ ಮುಖಂಡ ಕೆ.ಪಿ.ಪಾಲಯ್ಯ, ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಸಿದ್ದೇಶ್, ಯು.ಜಿ.ಶಿವಕುಮಾರ್, ತಿಪ್ಪೇಸ್ವಾಮಿಗೌಡ, ಪ್ರಕಾಶ್ ರೆಡ್ಡಿ, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ, ಎಸ್.ಕೆ.ರಾಮರೆಡ್ಡಿ, ಎಂ.ಎಸ್ ಪಾಟೀಲ್, ಗುರುಸಿದ್ದನಗೌಡ, ಹರೀಶ್, ಜಿ.ಬಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.