ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿ 4 ದಿನ ಕಳೆದರೂ ಈವರೆಗೂ ಆತನ ಬಗ್ಗೆ ಸುಳಿವು ಸಿಕ್ಕಿಲ್ಲ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಶಾಸಕರ ನಿವಾಸಕ್ಕೆ ಬುಧವಾರ ಭೇಟಿ ನೀಡಿದರು. ಚಂದ್ರಶೇಖರ್ ಮಲಗುವ ಕೋಣೆಯನ್ನು ಪರಿಶೀಲಿಸಿದರು. ನಂತರ ಪ್ರತ್ಯೇಕ ಕೋಣೆಯಲ್ಲಿ ಶಾಸಕರ ಸಹೋದರರು, ಮಕ್ಕಳು ಸೇರಿದಂತೆ ಎಲ್ಲರನ್ನೂ ಪ್ರತ್ಯೇಕವಾಗಿ ಸತತ ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕಿದರು.
‘ವಿಚಾರಣೆ ನಡೆಯುತ್ತಿದೆ. ಏನಾಗಿದೆ ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಾಡಿ ಬೇರೆ ಬೇರೆ ಕಡೆಗಳಿಗೆ ಸಿಬ್ಬಂದಿ ಕಳುಹಿಸಿಕೊಡಲಾಗಿದೆ’ ಎಂದು ಎಸ್ಪಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಅ. 30ರಂದು ರಾತ್ರಿ 11.48ಕ್ಕೆ ಚಂದ್ರಶೇಖರ್ ಅವರ ಕಾರು ಸುರಹೊನ್ನೆ ದಾಟಿ ಹೊನ್ನಾಳಿಯ ಕಡೆ ಸಾಗಿದೆ. ಆದರೆ ಕಾರು ಹೊನ್ನಾಳಿಗೆ ಬಂದಿಲ್ಲ. ಶಿವಮೊಗ್ಗದಿಂದ ಒಬ್ಬನೇ ಬಂದಿರುವ ಬಗ್ಗೆ ಮಾಹಿತಿ ಇದ್ದರೂ ಸುರಹೊನ್ನೆಯಿಂದ ಹೊನ್ನಾಳಿಯ ಕಡೆಗೆ ಚಲಿಸುವಾಗ ಕಾರಿನಲ್ಲಿ ಇಬ್ಬರು ಇದ್ದುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಕಾರು ಯಾವ ದಿಕ್ಕಿನ ಕಡೆ ಹೋಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಶಾಸಕರ ನಿವಾಸಕ್ಕೆ ತೆರಳಿ ಸಮಾಧಾನ ಹೇಳಿದರು. ‘ನಾಪತ್ತೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುತ್ತಿದ್ದಾರೆ’
ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.