ADVERTISEMENT

ಬಸವಾಪಟ್ಟಣ | ಭತ್ತದ ಬೆಳೆಗೆ ವಿಷ ಸಿಂಪಡಣೆ ಆರೋಪ: ದೂರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 13:38 IST
Last Updated 10 ಸೆಪ್ಟೆಂಬರ್ 2024, 13:38 IST
ಬಸವಾಪಟ್ಟಣ ಸಮೀಪದ ಹರೋಸಾಗರದ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನಿನಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಬೆಳೆಗೆ ಕಿಡಿಗೇಡಿಗಳು ವಿಷಪೂರಿತ ಔಷಧವನ್ನು ಸಿಂಪಡಿಸಿರುವುದರಿಂದ ಫಸಲು ಒಣಗಲಾರಂಭಿಸಿದೆ
ಬಸವಾಪಟ್ಟಣ ಸಮೀಪದ ಹರೋಸಾಗರದ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನಿನಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಬೆಳೆಗೆ ಕಿಡಿಗೇಡಿಗಳು ವಿಷಪೂರಿತ ಔಷಧವನ್ನು ಸಿಂಪಡಿಸಿರುವುದರಿಂದ ಫಸಲು ಒಣಗಲಾರಂಭಿಸಿದೆ   

ಬಸವಾಪಟ್ಟಣ: ಸಮೀಪದ ಹರೋಸಾಗರದ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಗದ್ದೆಯಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆಗೆ ಕಿಡಿಗೇಡಿಗಳು ವಿಷಪೂರಿತ ದ್ರಾವಣ ಸಿಂಪಡಣೆ ಮಾಡಿರುವುದರಿಂದ 2.75 ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಹಾಳಾಗಿದೆ ಎಂದು ದೇಗುಲ ಸಮಿತಿಯ ಸದಸ್ಯರು ದೂರಿದ್ದಾರೆ.

ಗ್ರಾಮದ ಬಸವೇಶ್ವರಸ್ವಾಮಿ ದೇಗುಲಕ್ಕೆ ಸೇರಿದ ಗದ್ದೆಯನ್ನು ಚಿರಡೋಣಿಯ ಹಾಲೇಶ್‌ ಅವರಿಗೆ ಗುತ್ತಿಗೆಗೆ ನೀಡಿದ್ದೆವು. ಒಂದೂವರೆ ತಿಂಗಳ ಹಿಂದೆ ಹಾಲೇಶ್‌ ಅವರು ಆರ್‌ಎನ್‌ಆರ್‌ ತಳಿಯ ಭತ್ತದ ಸಸಿಗಳನ್ನು ನಾಟಿ ಮಾಡಿದ್ದರು. ಆದರೆ, ಕಿಡಿಗೇಡಿಗಳು ಆ ಬೆಳೆಗೆ ವಿಷ ಹಾಕಿರುವುದರಿಂದ ಬೆಳೆ ಒಣಗಲಾರಂಭಿಸಿದೆ. ರೈತನಿಗೂ ಮತ್ತು ದೇಗುಲಕ್ಕೂ ನಷ್ಟವಾಗಿದೆ. ಭತ್ತದ ಸಸಿಗಳ ಸುಳಿಯಲ್ಲಿ ವಿಷ ಬಿದ್ದಿರುವುದರಿಂದ ಸಸಿಗಳು ಚೇತರಿಸಿ ಕೊಳ್ಳುವುದಿಲ್ಲ. ಒಂದು ವಾರದಲ್ಲಿ ಸಂಪೂರ್ಣ ಒಣಗುತ್ತವೆ. ಈ ಬಗ್ಗೆ ಬಸವಾಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇವೆ’ ಎಂದು ದೇಗುಲ ಸಮಿತಿಯ ಸದಸ್ಯರಾದ ವೈ.ಬಿ.ನಾಗರಾಜ್‌, ಪಿ.ಜಿ.ಮಂಜುನಾಥ್‌, ಎನ್‌.ಬಿ.ಹಾಲೇಶ್‌, ಎನ್‌.ಲಿಂಗರಾಜ್‌, ಎ.ಕೆ.ರಂಗಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT