ADVERTISEMENT

ಪ್ರೇಯಸಿಯ ಶೀಲ ಶಂಕಿಸಿ ಕೊಲೆ: ಪ್ರಿಯಕರನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:02 IST
Last Updated 29 ಏಪ್ರಿಲ್ 2021, 5:02 IST

ದಾವಣಗೆರೆ: ಪತಿ ಇಲ್ಲದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಪತ್ನಿ ಇಲ್ಲದ ಪುರುಷನು ಆಕೆಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ.

ಹೊನ್ನಾಳಿ ತಾಲ್ಲೂಕು ನೀಲಾಪುರ ಗ್ರಾಮದ ವಸಂತ ಬಾಯಿ (30) ಕೊಲೆಯಾದವರು. ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಗ್ರಾಮದ ವೆಂಕಟೇಶ್‌ ಕೊಲೆ ಮಾಡಿದ ಆರೋಪಿ. ಚನ್ನಗಿರಿ ತಾಲ್ಲೂಕು ಅಜ್ಜಿಹಳ್ಳಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ವಸಂತ ಬಾಯಿಯ ಪತಿ ನಿಧನರಾಗಿದ್ದರು. ಆಕೆ ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಿದ್ದರು. ವೆಂಕಟೇಶ್‌ನ ಪತ್ನಿ ಕೂಡ ಮೃತಪಟ್ಟಿದ್ದರು. ಗಾರೆ ಕೆಲಸ ಮಾಡುವ ವೆಂಕಟೇಶ್‌ಗೆ ನಾಲ್ಕು ವರ್ಷಗಳ ಹಿಂದೆ ಚೀಲಾಪುರದಲ್ಲಿ ವಸಂತಬಾಯಿ ಪರಿಚಯವಾಗಿದ್ದರು. ಬಳಿಕ ಅವರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು.

ADVERTISEMENT

ಮಂಗಳವಾರ ವಸಂತಬಾಯಿ ತನ್ನ ಅತ್ತಿಗೆ ಹಮೀಬಾಯಿ ಜತೆಗೆ ಮರವಂಜಿ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವೆಂಕಟೇಶ್‌ ಕರೆ ಮಾಡಿದ್ದ. ಆಕೆ ಮರವಂಜಿ ಗ್ರಾಮದಲ್ಲಿ ಇರುವುದನ್ನು ತಿಳಿದು ಈತನೂ ರಾತ್ರಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಪ್ರಶಾಂತ್‌ ಎಂಬವರ ಬೈಕಿನಲ್ಲಿ ವಸಂತಬಾಯಿ ಬರುತ್ತಿರುವುದನ್ನು ಕಂಡು ಸಿಟ್ಟುಕೊಂಡು ಆತನಿಗೆ ಹಲ್ಲೆ ನಡೆಸಿ ತನ್ನ ಬೈಕ್‌ನಲ್ಲಿ ವಸಂತ ಬಾಯಿಯನ್ನು ಕರೆದುಕೊಂಡು ಬಂದಿದ್ದಾನೆ. ದೊಂದರಘಟ್ಟದಿಂದ ಮಾಡಾಳ್ ಗ್ರಾಮಕ್ಕೆ ಹೋಗುವ ಮಣ್ಣು ರಸ್ತೆಯ ತೋಟದ ಬಳಿ ವಸಂತಬಾಯಿಯೊಂದಿಗೆ ಲೈಗಿಂಕ ಸಂಪರ್ಕ ಮಾಡಿದ್ದಾನೆ. ಬಳಿಕ ಶೀಲ ಶಂಕಿಸಿ ಜಗಳವಾಡಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಚನ್ನಗಿರಿ ಪಿಎಸ್‌ಐಗಳಾದ ಜಗದೀಶ್, ರೂಪ್ಲಿಬಾಯಿ, ಸಿಬ್ಬಂದಿ ರುದ್ರೇಶ್, ಮೊಹಮ್ಮದ್ ಖಾನ್, ಅರುಣ್ ಕುಮಾರ್, ಶ್ರೀನಿವಾಸಮೂರ್ತಿ, ಪರಶುರಾಮ್, ರೇವಣಸಿದ್ದಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.