
ಚನ್ನಗಿರಿ: ‘ಸಾರಿಗೆ ಸಂಸ್ಥೆಯ ಚನ್ನಗಿರಿ ಘಟಕದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೋಮವಾರ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಮಾರ್ಗದ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಚನ್ನಗಿರಿಯನ್ನು ಬೆಳಿಗ್ಗೆ 7 ಗಂಟೆಗೆ ಬಿಡುವ ಈ ಬಸ್ ಪಾಂಡೋಮಟ್ಟಿ– ಕಂಚಿಗನಾಳ್– ಬೆಟ್ಟಕಡೂರು– ಹೊಸದುರ್ಗ– ಗುಬ್ಬಿ– ತುಮಕೂರು ಮಾರ್ಗವಾಗಿ ಮಧ್ಯಾಹ್ನ 1.15ಕ್ಕೆ ಬೆಂಗಳೂರು ತಲುಪಲಿದೆ. ನಂತರ ಮಧ್ಯಾಹ್ನ 3.15ಕ್ಕೆ ಬೆಂಗಳೂರು ಬಸ್ ನಿಲ್ದಾಣದಿಂದ ಹೊರಟು ಇದೇ ಮಾರ್ಗವಾಗಿ ರಾತ್ರಿ 10.30ಕ್ಕೆ ಚನ್ನಗಿರಿ ತಲುಪಲಿದೆ ಎಂದು ಮಾಹಿತಿ ನೀಡಿದರು.
‘ಈಗಾಗಲೇ ಪಟ್ಟಣದಲ್ಲಿ ಚನ್ನಗಿರಿ ಘಟಕ ಪ್ರಾರಂಭವಾಗಿದ್ದು, ಈ ಘಟಕದಿಂದ 44 ಬಸ್ಗಳು ಸಂಚಾರ ಆರಂಭಿಸಿವೆ. ಮಂಗಳೂರು– ಹುಬ್ಬಳ್ಳಿ– ಈಚಲಕಾರಂಜಿ– ಚಿಕ್ಕಮಗಳೂರು– ಹೊಸದುರ್ಗ– ಭದ್ರಾವತಿ– ವಿಜಯನಗರ ಮುಂತಾದ ನಗರ ಪ್ರದೇಶಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೆಯೇ ಇದುವರೆಗೆ ಬಸ್ ಸಂಚಾರವಿಲ್ಲದ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದರು.
ಪುರಸಭೆ ಮಾಜಿ ಸದಸ್ಯ ಜಿ. ನಿಂಗಪ್ಪ, ಕಾಂಗ್ರೆಸ್ ಯುವ ಮುಖಂಡ ಕುಮಾರ್ ತಳವಾರ್, ಮಧುಕುಮಾರ್, ರವಿಕುಮಾರ್, ಚನ್ನಗಿರಿ ಘಟಕದ ವ್ಯವಸ್ಥಾಪಕ ಅಬ್ದುಲ್ ಖಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.