ADVERTISEMENT

ನಕಲಿ ಬ್ಯಾಂಕ್‌ ಖಾತೆ ತೆರೆದು ಸೈಬರ್‌ ವಂಚಕರಿಗೆ ನೆರವು: ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 19:00 IST
Last Updated 21 ಫೆಬ್ರುವರಿ 2026, 19:00 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ದಾವಣಗೆರೆ: ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಸೈಬರ್ ವಂಚಕರಿಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಇಬ್ಬರನ್ನು ಇಲ್ಲಿನ
ಸೈಬರ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ನಗರದ ಪರಶುರಾಮ್‌ (30) ಹಾಗೂ 19 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಬಂಧಿತರು. ಇಬ್ಬರಿಂದ ಲ್ಯಾಪ್‌ಟಾಪ್‌, ಎರಡು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ನಕಲಿ ಖಾತೆಗಳು ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಸೈಬರ್‌
ವಂಚನೆ ಜಾಲ ಪತ್ತೆಯಾಗಿದೆ. ಸೈಬರ್ ವಂಚನೆಯ ಹಣವನ್ನು ವರ್ಗಾವಣೆ ಮಾಡುವ ಉದ್ದೇಶದಿಂದ ಈ ಖಾತೆಗಳನ್ನು ಬಳಸುತ್ತಿರುವುದು ಗೊತ್ತಾಗಿದೆ. ದೇಶದ ವಿವಿಧೆಡೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಖಚಿತವಾಗಿದೆ.

ಸುಳ್ಳುಮಾಹಿತಿ ನೀಡಿ ಪರಶುರಾಮ್‌ 6 ಕಡೆ ಬ್ಯಾಂಕ್‌ ಖಾತೆ ತೆರೆದಿದ್ದಾನೆ. ಈ ಮೂಲಕ ನಡೆದಿದ್ದ ವಂಚನೆಯ ವಿರುದ್ಧ ದೇಶದ ವಿವಿಧ ಠಾಣೆಗಳಲ್ಲಿ 95 ಪ್ರಕರಣ ದಾಖಲಾಗಿವೆ. 19 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ 2 ಬ್ಯಾಂಕ್‌ ಖಾತೆ ಹೊಂದಿದ್ದು, 8 ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಖಾತೆ: 35 ವಂಚನೆ ಪ್ರಕರಣ

ಬಳ್ಳಾರಿ: ದೇಶದ ವಿವಿಧೆಡೆ ದಾಖಲಾಗಿರುವ 35 ಆನ್‌ಲೈನ್‌ ವಂಚನೆ ಪ್ರಕರಣ
ಗಳಲ್ಲಿ ಬಳ್ಳಾರಿ ನಗರದ ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆಯ ಉಲ್ಲೇಖ
ವಿರುವುದು ಬಯಲಾಗಿದೆ.  

ರಾಜ್ಯದ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಠಾಣೆ ಪೊಲೀಸರು ‘ಮ್ಯೂಲ್‌ (ಯಾರ ಪರವಾಗಿಯೋ ಅಕ್ರಮವಾಗಿ ಪಡೆದ ಹಣವನ್ನು ಇನ್ಯಾರಿಗೋ ವರ್ಗಾಯಿಸುವ)’ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾಗ ಬಳ್ಳಾರಿ ಖಾತೆಯ ವಂಚನೆ ವಿವರ ಗೊತ್ತಾಗಿದೆ.   

ಖಾತೆಯು ಸಂಡೂರಿನ ತಾರಾನಗರದ ಸ್ವಾಮಿ ಎಚ್.ಎ ಸ್ಅವರಿಗೆ ಸೇರಿದ್ದು ಎಂಬುದು ತಿಳಿದಿದೆ. ವಿಚಾರಣೆ ವೇಳೆ ಅವರು, ‘ಆಂಧ್ರಪ್ರದೇಶದ ಹರಿಜನ ವಂಡ್ರಪ್ಪ ಎಂಬಾತ ₹1 ಕೋಟಿ ಸಬ್ಸಿಡಿ ಸಾಲ ಕೊಡಿಸುವ ಆಮಿಷವೊಡ್ಡಿ ‘ನಿಸ್ಸಿ ಎಂಟರ್‌ಪ್ರೈಸಸ್‌’ ಎಂಬ ಕಂಪನಿ ಹೆಸರಲ್ಲಿ 2025ರ ಮೇ 3ರಂದು ಖಾತೆ ತೆರೆಸಿದ್ದರು. ಪಾಸ್ ಬುಕ್‌, ಎಟಿಎಂ ಸೇರಿ ಎಲ್ಲ ದಾಖಲೆಗಳನ್ನೂ ಅವರೇ ಇಟ್ಟುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.  ಸಾರ್ವಜನಿಕರಿಗೆ ವಂಚಿಸಲೆಂದೇ ಒಟ್ಟುಗೂಡಿ ಖಾತೆ ಮಾಡಿಸಿರುವ ಆರೋಪದಲ್ಲಿ ಇಬ್ಬರ ವಿರುದ್ಧ ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎಟಿಎಂಗೆ ಹಾಕದೇ ₹3.40 ಕೋಟಿ ದುರ್ಬಳಕೆ: ಪ್ರಕರಣ ದಾಖಲು

ಹಾಸನ: 15 ವಿವಿಧ ಎಟಿಎಂಗಳಿಗೆ ಹಾಕಬೇಕಿದ್ದ ₹3,40 ಕೋಟಿ ದುರ್ಬಳಕೆ ಆರೋಪದಡಿ ಸಿಎಂಎಸ್‌ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೂವನಹಳ್ಳಿಯ ನಂದೀಶ್ ಬಿ.ಎಲ್. ಹಾಗೂ ದಾಸರಕೊಪ್ಪಲಿನ ಮಧುಕುಮಾರ್ ಎಂ.ಪಿ ವಿರುದ್ಧ ಕಂಪನಿಯ ಶಾಖಾ ವ್ಯವಸ್ಥಾಪಕ ರಾಜು ದೂರು ನೀಡಿದ್ದಾರೆ.

15 ಬ್ಯಾಂಕ್‍ಗಳ 28 ಎಟಿಎಂಗಳಿಗೆ ಹಾಕಲು ಈ ಹಣ ಒದಗಿ ಸಲಾಗಿತ್ತು. ಫೆ.18ರಂದು ಲೆಕ್ಕ ಪರಿಶೋಧನೆ ವೇಳೆ ಅಕ್ರಮ ಬೆಳಕಿಗೆ ಬಂತು. 19ರ ರಾತ್ರಿವರೆಗೆ ಪರಿಶೋಧನೆ ನಡೆಸಿದ ಬಳಿಕ ದೂರು ನೀಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.