ಲೈಂಗಿಕ ಅಲ್ಪಸಂಖ್ಯಾತರು
(ಸಾಂದರ್ಭಿಕ ಚಿತ್ರ)
ದಾವಣಗೆರೆ: ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲೆಂದೇ ಸರ್ಕಾರ ರೂಪಿಸಿರುವ ‘ಉದ್ಯೋಗಿನಿ’ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಪೂರ್ಣ ಪ್ರಮಾಣದಲ್ಲಿ ಸಾಲ ಸೌಲಭ್ಯ ನೀಡಲು ಬ್ಯಾಂಕ್ಗಳು ಮೀನ– ಮೇಷ ಎಣಿಸುತ್ತಿವೆ.
ಚರಾಸ್ತಿ ಅಡ ಇರಿಸಿ ಭದ್ರತೆ ಒದಗಿಸಿದರೆ ಸಾಲ ಸೌಲಭ್ಯ ಸುಲಭ. ಆದರೆ, ಮನೆ, ಬಂಧು–ಬಳಗ ತೊರೆದು ದೂರವೇ ಇರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಚರಾಸ್ತಿ ಇರುವುದೇ ವಿರಳ. ಅಂಥವರಿಗೆ ಬ್ಯಾಂಕ್ಗಳು ಗರಿಷ್ಠ ಮಿತಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಸಾಲ ಮಂಜೂರು ಮಾಡಿ ಕೈತೊಳೆದುಕೊಳ್ಳುತ್ತಿವೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ‘ಉದ್ಯೋಗಿನಿ’ ಯೋಜನೆಯಡಿ ಪ್ರತಿ ಜಿಲ್ಲೆಯಿಂದ 3ರಿಂದ 5 ಜನ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರತಿ ವರ್ಷ ಆಯ್ಕೆ ಮಾಡುತ್ತಿದೆ. ಇವರಲ್ಲಿ ಗರಿಷ್ಠ ಮೊತ್ತದ ಸಾಲ ಬಹುತೇಕರಿಗೆ ದೊರೆಯುತ್ತಿಲ್ಲ.
ಕಿರಾಣಿ ಅಂಗಡಿ, ಕುರಿ, ಕೋಳಿ ಸಾಕಣೆ, ಬಟ್ಟೆ ವ್ಯಾಪಾರ, ಹೈನುಗಾರಿಕೆ, ತಿನಿಸುಗಳ ಮಾರಾಟ ಸೇರಿ ಹಲವು ಉದ್ಯೋಗ ಕೈಗೊಳ್ಳುವ ಉದ್ದೇಶದೊಂದಿಗೆ ಸಾಲ ಸೌಲಭ್ಯ ಕೋರಿ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೆ ₹ 1 ಲಕ್ಷದಿಂದ ₹ 3 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸಾಲದ ಮೊತ್ತದಲ್ಲಿ ಶೇ 50 ಹಾಗೂ ಉಳಿದವರಿಗೆ ಶೇ 30ರಷ್ಟು ಸಹಾಯಧನ ಸೌಲಭ್ಯವಿದೆ. ಭದ್ರತೆ ಒದಗಿಸುತ್ತಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ಗಳು ₹ 1 ಲಕ್ಷ ಅಥವಾ ₹ 1.5 ಲಕ್ಷದ ಮೊತ್ತವನ್ನು ಮಾತ್ರ ನೀಡುತ್ತಿವೆ.
‘ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಂದೂವರೆ ದಶಕ ಹೋರಾಟ ನಡೆಸಿದ್ದೇವೆ. ಉದ್ಯೋಗಿನಿ ಯೋಜನೆಯ ವ್ಯಾಪ್ತಿಗೆ ಲಿಂಗತ್ವ ಅಲ್ಪಸಂಖ್ಯಾತರನ್ನು ಸೇರಿಸಿದಾಗ ಖುಷಿಯಾಗಿದ್ದೆವು. ಆದರೆ, ಈ ಯೋಜನೆಯ ಫಲಾನುಭವಿಗಳಾಗಲು ಏದುಸಿರು ಬಿಡಬೇಕಿದೆ. ಮಹಿಳಾ ಅಭಿವೃದ್ಧಿ ನಿಗಮ ಆಯ್ಕೆ ಪ್ರಕ್ರಿಯೆ ಮುಗಿಸಿದರೂ ಬ್ಯಾಂಕ್ಗಳು ಕೇಳಿದಷ್ಟು ಸಾಲ ನೀಡುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ಅಭಯ ಸ್ಪಂದನಾ ಸಮುದಾಯ ಆಧಾರಿತ ಸಂಘಟನೆ ಅಧ್ಯಕ್ಷೆ ಚೈತ್ರಾ ಎಸ್.ಹೊನ್ನಮರಡಿ.
ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಉಮಾ, ಕುರಿ ಸಾಕಾಣಿಕೆಗೆ ಸಾಲ ಕೋರಿ 2024–25ನೇ ಆರ್ಥಿಕ ವರ್ಷದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ‘ಭದ್ರತೆ ಒದಗಿಸಬೇಕು’ ಎಂಬ ಬ್ಯಾಂಕಿನ ಷರತ್ತುಗಳನ್ನು ಪೂರೈಸಲು ಇವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ₹ 1 ಲಕ್ಷ ಸಾಲಕ್ಕೆ ಮಾತ್ರ ರಾಷ್ಟ್ರೀಕೃತ ಬ್ಯಾಂಕ್ ಮಂಜೂರಾತಿ ನೀಡಿದೆ.
‘ಲಿಂಗತ್ವ ಅಲ್ಪಸಂಖ್ಯಾತರಾಗಿರುವ ಕಾರಣಕ್ಕೆ ಸಮಾಜ ತಿರಸ್ಕರಿಸಿದೆ. ಕುಟುಂಬದ ಸದಸ್ಯರೂ ಆಶ್ರಯ ನಿರಾಕರಿಸಿದ್ದಾರೆ. ಭಿಕ್ಷಾಟನೆ ತೊರೆದು ಸ್ವಯಂ ಉದ್ಯೋಗ ಕೈಗೊಳ್ಳುವ ಆಸಕ್ತಿಗೂ ಪ್ರೋತ್ಸಾಹ ಸಿಗುತ್ತಿಲ್ಲ. ಬ್ಯಾಂಕುಗಳು ನೀಡುವ ಕನಿಷ್ಠ ಮೊತ್ತದ ಸಾಲದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಚೈತ್ರಾ ತಿಳಿಸುತ್ತಾರೆ.
‘ಬ್ಯಾಂಕ್ ಜೊತೆಗೆ ವ್ಯವಹಾರ ಇಟ್ಟುಕೊಳ್ಳದ ಲಿಂಗತ್ವ ಅಲ್ಪಸಂಖ್ಯಾತರಿಗೆ ಏಕಕಾಲಕ್ಕೆ ದೊಡ್ಡ ಮೊತ್ತದ ಸಾಲ ಮಂಜೂರು ಮಾಡುವುದು ಕಷ್ಟ. ವ್ಯಾಪಾರ, ಉದ್ದಿಮೆಯ ಸ್ವರೂಪವನ್ನು ಗಮನಿಸಿ, ಸ್ಥಳ ಪರಿಶೀಲನೆ ನಡೆಸಿ ವ್ಯವಸ್ಥಾಪಕರು ತೀರ್ಮಾನ ಕೈಗೊಳ್ಳುತ್ತಾರೆ. ಉತ್ತಮ ವಹಿವಾಟು ನಡೆಸಿ ಗರಿಷ್ಠ ಮೊತ್ತದ ಸಾಲಕ್ಕೆ ಅರ್ಹತೆ ಪಡೆಯಲು ಅವರಿಗೆ ಅವಕಾಶವಿದೆ’ ಎನ್ನುತ್ತಾರೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್.ಆಚಾರ್ಯ.
ನಿಗಮಕ್ಕೆ ಸಲ್ಲಿಕೆಯಾದ ಅರ್ಜಿ ಪರಿಶೀಲಿಸಿ ಫಲಾನುಭವಿ ಆಯ್ಕೆ ಮಾಡುತ್ತೇವೆ. ಸಾಲದ ಗರಿಷ್ಠ ಮೊತ್ತ ಪಾವತಿಸುವಂತೆ ಬ್ಯಾಂಕ್ಗಳಿಗೆ ಕೇಳಿಕೊಂಡಿದ್ದೇವೆ.–ಐ.ಟಿ.ಮಂಜುಳಾ, ನಿರೀಕ್ಷಕಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ
ಕುರಿ ಸಾಕಣೆಗೆ ₹ 3 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೆ. ಆಸ್ತಿ, ಮನೆಯ ಭದ್ರತೆ ಒದಗಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಅರ್ಧದಷ್ಟು ಮೊತ್ತವನ್ನೂ ನೀಡುತ್ತಿಲ್ಲ.–ಉಮಾ, ಲಿಂಗತ್ವ ಅಲ್ಪಸಂಖ್ಯಾತೆ, ಹದಡಿ, ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.