ದಾವಣಗೆರೆ:ವಿಶ್ವ ಪರಿಸರ ದಿನದ ಅಂಗವಾಗಿ ಮಿಯಾವಾಕಿ ಪದ್ಧತಿಯಲ್ಲಿ ನಗರದಲ್ಲಿ ಅತಿ ಕಡಿಮೆ ಪ್ರದೇಶದಲ್ಲಿ ಹೆಚ್ಚು ಸಸಿ ನೆಡುವ ಮೂಲಕ ನಗರ ಅರಣ್ಯ ಮಾಡುವ ಗುರಿ ಹೊಂದಲಾಗಿದೆ ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಡಿಸಿಎಂ ಟೌನ್ಶಿಪ್ನ ವಿವೇಕಾನಂದ ಪಾರ್ಕ್ನಲ್ಲಿ ಶನಿವಾರ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ಮಿಯಾವಾಕಿ ಜಪಾನಿನ ಖ್ಯಾತ ಪರಿಸರ ತಜ್ಞ. ಅತಿಕಡಿಮೆ ಪ್ರದೇಶದಲ್ಲಿ ವಿವಿಧ ಜಾತಿಯ ಅತಿಹೆಚ್ಚು ಗಿಡಗಳನ್ನು ಬೆಳೆಸಿದವರು. ಸಸಿಗಳನ್ನು 15 ಅಡಿಗೆ ಒಂದರಂತೆ ನೆಡಲಾಗುತ್ತದೆ. ಮಿಯಾವಾಕಿ ಪದ್ಧತಿಯಲ್ಲಿ 8 ಅಡಿ ಅಗಲ ಮತ್ತು 2 ಅಡಿ ಅಂತರದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಬಹುದು. ಇದೇ ಪದ್ಧತಿಯನ್ನು ದಾವಣಗೆರೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ನಗರ ಅರಣ್ಯ ಮಾಡಲು 20 ಜಾಗಗಳನ್ನು ಗುರುತಿಸಲಾಗಿದೆ. 60 ಸಾವಿರ ಗಿಡಗಳನ್ನು ನೆಡುವ ಚಿಂತನೆ ಇದೆ. 34 ಸಾವಿರ ಗಿಡಗಳು ಇವೆ. ಅವುಗಳನ್ನು ಮೊದಲು ನೆಡಲಾಗುವುದು. ಬಳಿಕ ಉಳಿದ ಗಿಡಗಳನ್ನು ತರಿಸಲಾಗುವುದು ಎಂದು ಹೇಳಿದರು.
‘ಈಚೆಗೆ ಮಂಗಳೂರಿನ ಶ್ರೀರಾಮಕೃಷ್ಣಾಶ್ರಮಕ್ಕೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ಜತೆಗೆ ಭೇಟಿ ನೀಡಿದ್ದೆವು. ಅಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಮಾಡಿರುವ ನಗರದ ದಟ್ಟ ಕಾಡು ವಾತಾವರಣ ಮನ ಸೆಳೆಯಿತು. ಹಸಿರು ಹೆಚ್ಚಿಸುವ, ಶುದ್ಧ ಉಸಿರು ಕಲ್ಪಿಸುವ ಈ ಯೋಜನೆಯನ್ನು ನಮ್ಮಲ್ಲೂ ಆರಂಭಿಸಿದ್ದೇವೆ. ಇದರಿಂದ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣ ದೊರೆ
ಯಲಿದೆ’ ಎಂದು ಮಾಹಿತಿ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ದೇವರಾಜ್ ಟಿ.ಎನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.