ದಾವಣಗೆರೆ: ಸೋಮವಾರವಷ್ಟೇ ಬಂದಿದ್ದ ಕೋವಿಶೀಲ್ಡ್ ಲಸಿಕೆಗಳು ಮಂಗಳವಾರ ಮಧ್ಯಾಹ್ನಕ್ಕೆ ಖಾಲಿಯಾದವು. ನಗರದ ಮೋತಿ ವೀರಪ್ಪ ಕಾಲೇಜು ಸೇರಿ ಹಲವು ಕಡೆ ಲಸಿಕೆ ಪಡೆಯಲು ಧಾವಿಸಿದರು.
ಬೆಳಿಗ್ಗೆ 8.30ಕ್ಕೆ ಕೋವಿಡ್ ಲಸಿಕೆ ಪಡೆಯಲು ಮೋತಿ ವೀರಪ್ಪ ಕಾಲೇಜಿನ ಬಳಿ ಮುಗಿಬಿದ್ದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಡಿಎಚ್ಒ ಡಾ.ನಾಗರಾಜ್ ಲಸಿಕೆ ಪಡೆಯಲು ಬಂದಿದ್ದ ಹಿರಿಯ ನಾಗರಿಕನ್ನು ಕೈಮುಗಿದು ಸ್ವಾಗತಿಸಿ ಮಾಹಿತಿ ಪಡೆದುಕೊಂಡರು.
ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಲ್ಲಿದ್ದವರಿಗೆ ‘ನಿಮ್ಮ ಜೀವವನ್ನು ರಕ್ಷಿಸಿಕೊಳ್ಳುವುದಕ್ಕಾದರೂ ಲಸಿಕೆಗಳನ್ನು ಹಾಕಿಸಿಕೊಳ್ಳಿ’ ಎಂದು ಮನವಿ ಮಾಡಿದರು.
‘ನಾನೇ ಲಸಿಕೆ ಹಾಕಿಸಿಕೊಂಡು ಜನರಿಗೆ ಕೈ ಮುಗಿದು ಮನವಿ ಮಾಡಿದ್ದೆ. ಆದರೆ, ಯಾರೂ ಮುಂದೆ ಬರಲಿಲ್ಲ. ಇದೀಗ ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದು, ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ಧಾರೆ. ಇದು ನಮಗೂ ಖುಷಿ ತಂದಿದೆ. ನಮಗೆ ಕೆಲಸ ಮಾಡಲು ಧೈರ್ಯ ಬರುತ್ತಿದೆ’ ಎಂದರು.
‘ಸೋಮವಾರ 6000 ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದ್ದು, ಅವುಗಳಲ್ಲಿ 5,300 ಡೋಸ್ ಖಾಲಿಯಾಗಿದೆ. ಉಳಿದ ಲಸಿಕೆಗಳನ್ನು ಬುಧವಾರ ನೀಡಲಾಗುವುದು. ಬುಧವಾರ ಸಾಯಂಕಾಲದ ವೇಳೆಗೆ ಬೆಂಗಳೂರಿಗೆ ಲಸಿಕೆ ಬರುವ ಮಾಹಿತಿ ಇದ್ದು, ದಾವಣಗೆರೆಗೆರೆ ಬಂದ ನಂತರ ಹಾಕಲಾಗುವುದು’ ಎಂದು ಕೋವಿಡ್ ಉಸ್ತುವಾರಿ ಡಾ.ಮೀನಾಕ್ಷಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.