ದಾವಣಗೆರೆ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜನರ ಬೆಂಬಲವೇ ಕಾರಣ. ಶೇ 80ರಷ್ಟು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರಿದ್ದಾರೆ. ಹೀಗಿರುವಾಗ ಸಂಪುಟ ಪುನರ್ ರಚನೆಯಲ್ಲಿ ಸಮಾಜದವರಿಗೆ ಆದ್ಯತೆ ನೀಡಿ, ಇಬ್ಬರು, ಮೂವರಿಗೆ ಸಚಿವಸ್ಥಾನ ನೀಡಲೇಬೇಕು’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ದಾವಣಗೆರೆ ಜಿಲ್ಲಾ ಘಟಕ ಹಾಗೂ ವಿವಿಧ ಘಟಕಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ ಆಯ್ಕೆ ಮಾಡಲು ಮುಂದಾದರೆ ನಮ್ಮ ಸಮಾಜದವರಿಗೇ ಆದ್ಯತೆ ನೀಡಬೇಕು. ಆಯ್ಕೆ ಮಾಡುವ ಮುನ್ನ ಪೀಠದ ಒಪ್ಪಿಗೆ, ಸಲಹೆ ಕೇಳಲೇಬೇಕು. ಯಾವ ಸರ್ಕಾರವಾಗಲಿ, ಪಕ್ಷವಾಗಲಿ ಸಮಾಜದವರನ್ನು ಕಡೆಗಣಿಸುವಂತಿಲ್ಲ’ ಎಂದು ಎಚ್ಚರಿಸಿದರು.
‘ಎಲ್ಲ ಪಕ್ಷಗಳಲ್ಲೂ ಸಮಾಜದ ಮುಖಂಡರಿದ್ದಾರೆ. ಎಲ್ಲ ಮಠಗಳ ಅಭಿವೃದ್ಧಿಗೂ ಶ್ರಮಸಿದ್ದಾರೆ. ಇಷ್ಟು ದಿನ ಎಲ್ಲರಿಗೂ ಸಹಕಾರ ನೀಡಿದ್ದು ಸಾಕು. ಇನ್ನೂ ನಾವು ಬೆಳೆಯಬೇಕಲ್ಲ. ಸಮಾಜದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.