ಹರಿಹರ: ವೈಕುಂಠ ಏಕಾದಶಿ ನಿಮಿತ್ತ ಶನಿವಾರ ನಗರದ ಇತಿಹಾಸ ಪ್ರಸಿದ್ಧ ಹರಿಹರೇಶ್ವರ ದೇವಸ್ಥಾನದಲ್ಲಿ ಸ್ವಾಮಿ ಮೂರ್ತಿಗೆ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
ವೈಕುಂಠ ಏಕಾದಶಿ ಧನುರ್ಮಾಸದ (ಪುಷ್ಯ ಮಾಸ) ಅಂಗವಾಗಿ ಪ್ರತಿ ವರ್ಷದಂತೆ ಪೂರ್ವ ದಿಕ್ಕಿನ ಬಾಗಿಲು ಮುಚ್ಚಿ, ವೈಕುಂಠ ದ್ವಾರವೆನಿಸಿದ ದಕ್ಷಿಣ ದ್ವಾರದ ಮೂಲಕ ಭಕ್ತರರಿಗೆ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ದ್ವಾರದ ಮೂಲಕ ಸ್ವಾಮಿಯ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ.
ಬೆಳಗಿನ ಜಾವ 3.30ರಿಂದಲೇ ಧಾರ್ಮಿಕ ವಿಧಿ, ವಿಧಾನಗಳು ಆರಂಭವಾದವು. ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಆಷ್ಟೋತ್ತರ ನಾಮವಳಿಯ ನಂತರ ವಿವಿಧ ಹೂಗಳಿಂದ ಅಲಂಕರಿಸಿ, 5.30ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ನಸುಕಿನ ಕೊರೆವ ಚಳಿಯಲ್ಲೂ ಸಾಲಾಗಿ ನಿಂತು ಸ್ವಾಮಿಯ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.