ನ್ಯಾಮತಿ: ಪಟ್ಟಣದ ವೀರಭದ್ರೇಶ್ವರಸ್ವಾಮಿ ರಥೋತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು.
ದೇವಸ್ಥಾನದಲ್ಲಿ ಮುಂಜಾನೆ ವೀರಭದ್ರೇಶ್ವರಸ್ವಾಮಿ, ಕಾಳಿಕಾಂಬದೇವಿಗೆ ರುದ್ರಾಭಿಷೇಕ, ವಿಶೇಷ ಆಲಂಕಾರ ಪೂಜೆ ಹಾಗೂ ಕಲ್ಯಾಣೋತ್ಸವ ನೆರವೇರಿತು. ರಥವನ್ನು ಹೂವಿನಮಾಲೆ, ಬಾಳೆಗೊನೆ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ತೇರಿನ ಗಾಲಿಗೆ ಎಡೆಬಾನ ಸೇವೆ ಸಲ್ಲಿಸಿದ ನಂತರ ದೇವಾಲಯದಿಂದ ವಿವಿಧ ಮಂಗಳವಾದ್ಯಗಳೊಂದಿಗೆ ವೀರಭದ್ರೇಶ್ವರಸ್ವಾಮಿ ಮತ್ತು ಕಾಳಿಕಾಂಬ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರು ರಥವನ್ನು ಎಳೆದರು.
ಹರಕೆ ಹೊತ್ತ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎರಚಿ ಭಕ್ತಿ ಸಮರ್ಪಿಸಿದರು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರಿನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವೀರಭದ್ರೇಶ್ವರಸ್ವಾಮಿ ರಥೋತ್ಸವ ಸಮಿತಿ, ಮಾರಮ್ಮ ಮತ್ತು ದುರ್ಗಮ್ಮ ದೇವಿ ಸೇವಾ ಸಮಿತಿ, ಉಣ್ಣೆ ಬಸವೇಶ್ವರಸೇವಾ ಸಮಿತಿ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.