
ದಾವಣಗೆರೆ: ರಾಘವೇಂದ್ರ ಸ್ವಾಮೀಜಿ ಅವರು ಸರ್ವಕಾಲಕ್ಕೂ ಪವಾಡ ಪುರಷ. ಅವರು ರಚಿಸಿದ 51 ಅಪೂರ್ವ ಗ್ರಂಥಗಳೇ ಇದಕ್ಕೆ ಸಾಕ್ಷಿ ಎಂದು ಫಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವದ ಅಂಗವಾಗಿ ಬುಧವಾರ ಸಂಸ್ಥಾನ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
‘ರಾಯರ ವೃಂದಾವನ ಮಾಡಿದ ಸ್ಥಳ ಜಾತಿ ಭೇದವಿಲ್ಲದೆ ಎಲ್ಲರನ್ನು ಉದ್ಧಾರ ಮಾಡುತ್ತಿದೆ. ಅವರ ಪವಾಡಗಳು ಆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತ ಸಂಚರಿಸಿ ಪಾಠ, ಪ್ರವಚನ ಮಾಡಿದ್ದಾರೆ. ಅವರು ರಚಿಸಿದ ಗ್ರಂಥಗಳಿಂದ ಜ್ಞಾನದ ಶ್ರೀಮಂತಿಕೆ ಲಭಿಸಿದೆ’ ಎಂದು ಹೇಳಿದರು.
‘ರಾಯರ ಮಠವು ಲೌಕಿಕವಾಗಿ ಮಾತ್ರವಲ್ಲ, ಭಕ್ತರ ನಂಬಿಕೆಯ ದೃಷ್ಟಿಯಿಂದಲೂ ಶ್ರೀಮಂತವಾಗಿದೆ. ಮಠವು ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಿನ ಸುಭೀಕ್ಷೆಗೆ ಕಾರಣವಾಗಲಿ’ ಎಂದು ಹಾರೈಸಿದರು.
ಪಂಡಿತ ಸುಧೀಂದ್ರ, ಸತ್ಯನಾರಾಯಣಾಚಾರ್ಯ ಉಪನ್ಯಾಸ ನೀಡಿದರು. ಕೊ.ಸಾ. ಪ್ರಸನ್ನಕುಮಾರ್, ಕಂಪ್ಲಿ ಗುರುರಾಜ ಆಚಾರ್ಯ, ಸುಬ್ರಹ್ಮಣ್ಯ, ವಾಚಸ್ಪತಿ ಆಚಾರ್, ವಾಗೀಶಾಚಾರ್, ಪ್ರಾಣೇಶಾಚಾರ್, ನರಗನಹಳ್ಳಿ ಶ್ರೀನಿವಾಸ್, ಪ್ರಹ್ಲಾದ್, ಸಿ.ಕೆ. ಆನಂದತೀರ್ಥಾಚಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.