ADVERTISEMENT

ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನ ಸಂಘಟಿಸಲು ಪುರುಷೊತ್ತಮ ಬಿಳೆಮಲೆ ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೊತ್ತಮ ಬಿಳೆಮಲೆ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 3:20 IST
Last Updated 4 ಫೆಬ್ರುವರಿ 2026, 3:20 IST
   

ದಾವಣಗೆರೆ: ವಿಶ್ವ ಕನ್ನಡ ಸಮ್ಮೇಳನವನ್ನು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ 2026–27ರಲ್ಲಿ ಸಂಘಟಿಸಬೇಕು ಎಂಬ ಆಗ್ರಹವನ್ನು ರಾಜ್ಯ ಸರ್ಕಾರದ ಮುಂದೆ ಇಡಲಾಗುವುದು. ಜಗತ್ತಿನ ಎಲ್ಲ ಕನ್ನಡಿಗರನ್ನು ಸೇರಿಸುವ ಈ ಸಮ್ಮೇಳನದ ಆಯೋಜನೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೊತ್ತಮ ಬಿಳೆಮಲೆ ತಿಳಿಸಿದರು.

‘ವಿಶ್ವ ಕನ್ನಡ ಸಮ್ಮೇಳನ 9 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಮಸ್ಯೆಯಿಂದಾಗಿ ಪ್ರಸಕ್ತ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಅನುಮಾನಗಳಿವೆ. ಇಂತಹ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುವುದು ಸೂಕ್ತ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ:

ADVERTISEMENT

‘ಕನ್ನಡಕ್ಕೆ ಸಾಹಿತ್ಯ, ಆರೋಗ್ಯ, ತಂತ್ರಜ್ಞಾನ, ಇತಿಹಾಸ ಸೇರಿದಂತೆ ಹಲವು ಆಯಾಮಗಳಿವೆ. ಈ ಎಲ್ಲ ಆಯಾಮಗಳಲ್ಲಿ ಕನ್ನಡ ಬಳಸಿದರೆ ಮಾತ್ರ ಭಾಷೆ ಬೆಳೆಯಲಿದೆ. ಭಾಷೆಯ ಬೆಳವಣಿಗೆಯ ಜವಾಬ್ದಾರಿ ಸಾಹಿತಿಗಳದ್ದು ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿದೆ. ಸಾಹಿತ್ಯದ ಜೊತೆಗೆ ಇತರ ಕ್ಷೇತ್ರಗಳಲ್ಲಿಯೂ ಕನ್ನಡ ಬೆಳೆಯಬೇಕು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕನ್ನಡದಲ್ಲಿ ಲಭ್ಯವಾಗಬೇಕು’ ಎಂದು ಹೇಳಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಬಳಕೆ ಇನ್ನಷ್ಟು ಹೆಚ್ಚಾಗಬೇಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕನ್ನಡ ಬಳಕೆ ಕಾಣುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕನ್ನಡ ಕಾಣುತ್ತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಹಂತ ಹಂತವಾಗಿ ಕನ್ನಡ ಬಳಕೆಗೆ ಸೂಚನೆ ನೀಡಲಾಗಿದೆ. ಔಷಧ ಚೀಟಿ ಕನ್ನಡದಲ್ಲಿ ಬರೆಯುವುದು ಕಷ್ಟವಾಗಬಹುದು. ಮರಣೋತ್ತರ ವರದಿ, ಮರಣ ಪ್ರಮಾಣ ಪತ್ರ ಕನ್ನಡದಲ್ಲಿ ಇರಬೇಕು’ ಎಂದು ಸೂಚಿಸಿದರು.

ಚನ್ನಗಿರಿಯಲ್ಲಿ ಕನ್ನಡ ಭವನ:

‘ಜಾತಿ ಕೇಂದ್ರಿತ ಭವನಗಳು ಇತ್ತೀಚೆಗೆ ಹೆಚ್ಚಾಗಿವೆ. ಇದರಿಂದ ಕನ್ನಡ ಭವನಗಳು ಹಿನ್ನೆಲೆಗೆ ಸರಿದಿವೆ. ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಆಗಬೇಕು. ಚನ್ನಗಿರಿ ತಾಲ್ಲೂಕಿನಲ್ಲಿ ಕನ್ನಡ ಭವನ ನಿರ್ಮಿಸಲು ಸ್ಥಳ ನೀಡುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಕನ್ನಡ ಭವನಕ್ಕೆ ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದರು.

‘ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಾಡಗೀತೆ ಕಡ್ಡಾಯಗೊಳಿಸಲಾಗಿದೆ. ಇದು ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡಿದೆ. ಆದರೆ, ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಮಾತ್ರ ಹಾಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡಬೇಕು’ ಎಂದು ಹೇಳಿದರು.

ಉರ್ದು ಶಾಲೆಯಲ್ಲಿ ಕನ್ನಡ ಕ್ಷೀಣ:

‘ಉರ್ದು ಶಾಲೆಗಳಲ್ಲಿ ಕನ್ನಡ ಸಮಸ್ಯೆಯಾಗಿ ಪರಿಣಮಿಸಿದೆ. ಮಾತೃ ಭಾಷೆಯಾಗಿ ಉರ್ದು ಕಲಿಯಲು ತಕರಾರು ಇಲ್ಲ. ಆದರೆ, ಕನ್ನಡವನ್ನು 2ನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ನಿಯಮವಿದೆ. ಕನ್ನಡ ಕಲಿಕೆ ಉರ್ದು ಶಾಲೆಗಳಲ್ಲಿ ಕ್ಷೀಣವಾಗಿದೆ. ಉರ್ದು ಶಾಲೆಗಳಲ್ಲಿ ಕನ್ನಡ ಬಲಗೊಳಿಸುವ ಪ್ರಯತ್ನ ಜಿಲ್ಲೆಯಲ್ಲಿ ಆಗಬೇಕಿದೆ’ ಎಂದರು.

‘ರಾಜ್ಯದ 180 ಮದರಸಾಗಳಲ್ಲಿ ಪ್ರಾಥಮಿಕ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. 2027ರ ಮಾರ್ಚ್‌ ಹೊತ್ತಿಗೆ ರಾಜ್ಯದ 1,200 ಮದರಸಾಗಳಲ್ಲಿ ಈ ಕೇಂದ್ರ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವೆ ಭಾಷೆಯೊಂದು ಸೇತುವೆಯಾಗಿ ಕೆಲಸ ಮಾಡಲಿದೆ’ ಎಂದು ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಸದಸ್ಯ ಎ.ಬಿ. ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯ ಎಲ್‌.ಜಿ. ಮಧುಕುಮಾರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.