
ದಾವಣಗೆರೆ: ಇಲ್ಲಿನ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ‘ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘ’ದಿಂದ ನವೆಂಬರ್ 23ರಂದು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಭಾರೀ ಕಾಟಾ ನಿಕಾಲಿ ಜಂಗಿ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ಖಜಾಂಚಿ ಕೆ.ಎಂ.ವೀರೇಶ್ ತಿಳಿಸಿದರು.
ಸಂಘದ ಅಧ್ಯಕ್ಷ ಬಿ.ವೀರಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 36 ಕುಸ್ತಿ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಗಾಗಿ ಒಟ್ಟು ₹10 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘23ರಂದು ಮಧ್ಯಾಹ್ನ 3.30ರಿಂದ ರಾತ್ರಿ 9 ಗಂಟೆ ವರೆಗೆ ಕುಸ್ತಿ ಪಂದ್ಯಗಳು ನಡೆಯಲಿವೆ. 1 ನಂಬರ್ ಪಂದ್ಯದ ಇಬ್ಬರು ಅಂತರರಾಷ್ಟ್ರೀಯ ಆಟಗಾರರಿಗೆ ತಲಾ ₹1 ಲಕ್ಷ ಹಾಗೂ ಇನ್ನೊಂದು ಪಂದ್ಯದ ರಾಷ್ಟ್ರಮಟ್ಟದ ಇಬ್ಬರು ಆಟಗಾರರಿಗೆ ತಲಾ ₹50,000 ಬಹುಮಾನ ನೀಡಲಾಗುತ್ತಿದೆ. ಪ್ರತೀ ಆಟಗಾರರಿಗೂ ಪ್ರತ್ಯೇಕ ಬಹುಮಾನ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘ಭಾರತೀಯ ಪ್ರಾಚೀನ ಕಲೆಗಳಲ್ಲಿ ಒಂದಾದ ಮತ್ತು ಇತ್ತೀಚೆಗೆ ಪ್ರೋತ್ಸಾಹವಿಲ್ಲದೇ ನಶಿಸುತ್ತಿರುವ ದೇಶಿ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಟೂರ್ನಿ ಆಯೋಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.
‘ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ದಾವಣಗೆರೆಯಲ್ಲಿ ಈ ಹಿಂದೆ ಪ್ರತೀ ತಿಂಗಳು ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಈಗ ಕಡಿಮೆಯಾಗಿದ್ದು, ಜನರ ಪ್ರೋತ್ಸಾಹ ಅಗತ್ಯವಾಗಿದೆ. ಈ ಬಾರಿ ಚಡ್ಡಿ ಹಿಡಿದು ಕುಸ್ತಿ ಆಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಸಂಘದ ಪ್ರಮುಖರಾದ ವಕೀಲ ಆಂಜನೇಯ, ಮಂಜುನಾಥ್ ಎಸ್., ಬಿ.ವಿ.ಪ್ರಮೋದ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.