
ಜಗಳೂರು: ‘ರಾಜಕೀಯ ಮುತ್ಸದ್ದಿಯಾಗಿದ್ದ ಜೆ.ಎಂ. ಇಮಾಂ ಅವರು ದಶಕಗಳ ಹಿಂದೆಯೇ ಕೆರೆಗಳನ್ನು ಕಟ್ಟುವ ಮೂಲಕ ನೀರಾವರಿಗೆ ಒತ್ತು ನೀಡಿದ್ದರು. ಪ್ರಾಮಾಣಿಕತೆ ಮತ್ತು ಬದ್ಧತೆಯ ರಾಜಕಾರಣಕ್ಕೆ ಮಾದರಿಯಾಗಿದ್ದರು’ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜೆ.ಎಂ. ಇಮಾಂ ಸ್ಮಾರಕ ಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ 7ನೇ ರಾಜ್ಯಮಟ್ಟದ ‘ಜೆ.ಎಂ ಇಮಾಂ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ಇಮಾಂ ಸಾಹೇಬರ ಸೇವೆ ಅವಿಸ್ಮರಣೀಯ. ಇಂದಿನ ಪೀಳಿಗೆಗೆ ಅವರು ಸ್ಫೂರ್ತಿಯಾಗಿದ್ದಾರೆ. ಹಿಂದಿನ ಸಿರಿಗೆರೆ ಶ್ರೀಗಳಿಗೂ ಅವರಿಗೂ ಅವಿನಾಭಾವ ಸಂಬಂಧವಿತ್ತು. ಅವರಿಬ್ಬರ ಕಾರ್ಯದ ಮುಂದುವರಿದ ಭಾಗವೇ 57 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯಾಗಿದೆ. ಇಮಾಂ ಸಾಹೇಬರು ರಚಿಸಿದ ಕೃತಿಯನ್ನು ಇಂಗ್ಲಿಷ್ನಿಂದ ಕನ್ನಡ ಭಾಷೆಗೆ ತರ್ಜುಮೆಗೊಳಿಸಿರುವೆ. ಹಸ್ತಪ್ರತಿಯನ್ನು ಪೂರ್ಣಪ್ರಮಾಣದಲ್ಲಿ ಶೀಘ್ರ ಹೊರತರಲಾಗುವುದು’ ಎಂದರು.
‘ಇಮಾಂ ಸಾಹೇಬರ ಕೊಡುಗೆಯಾಗಿರುವ ತಾಲ್ಲೂಕಿನ ಸಂಗೇನಹಳ್ಳಿ ಹಾಗೂ ಗಡಿಮಾಕುಂಟೆ, ತುಪ್ಪದಹಳ್ಳಿ ಕೆರೆಗಳು ಇಂದಿಗೂ ಜೀವಂತ ಸಾಕ್ಷಿಯಾಗಿವೆ. ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೂ ಅವರು ನಾಡಿನ ಸರ್ವಧರ್ಮೀಯರ ಪ್ರೀತಿ ವಿಶ್ವಾಸ ಗಳಿಸಿದ್ದರು. ಇಮ್ಮಣ್ಣ ಎಂದೇ ಪ್ರಸಿದ್ದಿ ಹೊಂದಿದ್ದರು. ಅವರ ಹಾದಿಯಲ್ಲಿಯೇ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತೇನೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
‘ಇಮಾಂ ಸಾಹೇಬರು ಮೊದಲ ಬಾರಿ ಅಧ್ಯಕ್ಷರಾಗಿದ್ದ ಪಟ್ಟಣದ ಹೃದಯಭಾಗದಲ್ಲಿನ ಪಟ್ಟಣ ಪಂಚಾಯಿತಿ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಅದನ್ನು ಸುಂದರವಾಗಿ ವಿನ್ಯಾಸಗೊಳಿಸಿ, ಜನಸಂಪರ್ಕ ಕಚೇರಿ ಹಾಗೂ ಸುಸಜ್ಜಿತ ಗ್ರಂಥಾಲಯ ಆರಂಭಿಸಲಾಗಿದೆ. ಶೀಘ್ರದಲ್ಲಿ ಸಿರಿಗೆರೆ ಶ್ರೀಗಳ ಸಾನ್ನಿಧ್ಯದಲ್ಲಿ ಕಟ್ಟಡದ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಜೆ.ಎಂ.ಇಮಾಂ ಟ್ರಸ್ಟ್ನ ಗೌರವಾಧ್ಯಕ್ಷ ಹಾಜಿ ಜೆ.ಕೆ.ಹುಸೇನ್ ಮಿಯಾ ಸಾಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿರುವ ಇಮಾಂ ಸಾಹೇಬರ ಮೊಮ್ಮಗಳು ಚಮಾನ್ಬೀ. ಫರ್ಜಾನ್, ಪಿಂಜಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಖಲೀಲ್ ಸಾಹೇಬ್, ಇಮಾಂ ಶಾಲೆಯ ಮುಖ್ಯ ಶಿಕ್ಷಕ ಜೆ.ಎ.ಆರ್. ಶಂಕರ್, ಮುನ್ನಾ ಸಾಬ್, ಹಲೀಮಾಬೀ, ಸಾಹಿತಿ ದಾದಾಪೀರ್ ನವಿಲೆಹಾಳ್, ಎನ್.ಟಿ.ಯರ್ರಿಸ್ವಾಮಿ, ಯಾದವರಡ್ಡಿ, ಕಸಾಪ ಪದಾಧಿಕಾರಿಗಳು, ಪೋಷಕರು, ವಿದ್ಯಾರ್ಥಿಗಳು ಇದ್ದರು.
‘ರಾಜಪ್ರಭುತ್ವ ಪ್ರಜಾಪ್ರಭುತ್ವ ಕಂಡಿದ್ದ ಶ್ರೇಷ್ಠ ಮುತ್ಸದ್ದಿ’ ‘
ಮುತ್ಸದ್ದಿ ಇಮಾಂ ಹೆಸರಿನ ಪ್ರಶಸ್ತಿಗೆ ನಾನು ಅರ್ಹನಲ್ಲ. ಅಳುಕಿನಿಂದಲೇ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಸ್ವಾತಂತ್ರ್ಯದ ನಂತರ ಸಮಾಜವಾದಿ ಪಕ್ಷದಿಂದ ಗುರುತಿಸಿಕೊಂಡು ವಿರೋಧ ಪಕ್ಷದ ನಾಯಕರಾಗಿದ್ದರು. ಅಂದಿನ ರಾಜಕಾರಣ ರಚನಾತ್ಮಕವಾಗಿತ್ತು. ಜನಪರವಾದ ವಿರೋಧ ಪಕ್ಷವಿತ್ತು. ಅವರು ರಾಜ ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಎರಡನ್ನೂ ಕಂಡವರಾಗಿದ್ದರು’ ಎಂದು ಪ್ರಶಸ್ತಿ ಸ್ವೀಕರಿಸಿದ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.
‘ಮೈಸೂರು ರಾಜರ ಆಡಳಿತದಲ್ಲಿ ವಿವಿಧ ಇಲಾಖೆಗಳ ಮಂತ್ರಿಯಾಗಿದ್ದ ಅವರು ಅಪಾರ ವಿದ್ವತ್ ಹೊಂದಿದ್ದರು. ಕೆಂಗಲ್ ಹನುಮಂತಯ್ಯರ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಇಮಾಂ ಸಾಹೇಬರು ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಕೆತ್ತಲು ಸಲಹೆ ನೀಡಿದವರು. ಸರ್ಕಾರದ ಸೇವೆಯನ್ನು ದೇವರ ಸೇವೆಯನ್ನಾಗಿಸುವ ಘೋಷವಾಕ್ಯವಾಗಿತ್ತು. ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಮರ್ಥರೂ ಅಸಹಾಯಕರಾಗಿದ್ದಾರೆ. ಮನಸ್ಸಿನೊಳಗೆ ತುಡಿತಗಳಿವೆ ಆದರೆ ಚುನಾವಣೆ ರಾಜಕಾರಣದಿಂದ ನಮಗರಿಯದೆ ಮೈಲಿಗೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ದತ್ತ ವಿಷಾದ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.