ADVERTISEMENT

ವೈದ್ಯಾಧಿಕಾರಿಗೆ ಪ್ರಾಣ ಬೆದರಿಕೆ: ದೂರು ದಾಖಲು

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ನಾಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 2:32 IST
Last Updated 19 ಡಿಸೆಂಬರ್ 2020, 2:32 IST
ಹೊಸಕೋಟೆಯ ಪೊಲೀಸ್ ಠಾಣೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ವೈದ್ಯಾಧಿಕಾರಿ ಡಾ. ಮಂಜುಳ ದೇವಿ.
ಹೊಸಕೋಟೆಯ ಪೊಲೀಸ್ ಠಾಣೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ವೈದ್ಯಾಧಿಕಾರಿ ಡಾ. ಮಂಜುಳ ದೇವಿ.   

ಹೊಸಕೋಟೆ: ನಿಗೂಢವಾಗಿ ನಾಪತ್ತೆಯಾಗಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಶುಕ್ರವಾರ ಬೆಳಿಗ್ಗೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚಿನ್ನಣ್ಣನವರ್‌ ಮುಂದೆ ಹಾಜರಾಗಿದ್ದಾರೆ.

ನೆಲಮಂಗಲದಲ್ಲಿ ಮಾತನಾಡಿದ ಅವರು, ತಮಗೆ ಯಾವುದೇ ರಾಜಕೀಯ ಒತ್ತಡವಿಲ್ಲ. ಕೆಲಸದ ಒತ್ತಡದಿಂದ ದೇವಾಲಯಗಳಿಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.

ಮಧ್ಯಾಹ್ನ ಹೊಸಕೋಟೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ದೇವಿ ಮತ್ತು ಇತರೆ ಆರೋಗ್ಯಾಧಿಕಾರಿಗಳ ಜೊತೆಯಲ್ಲಿ ಆಗಮಿಸಿದ ಮಂಜುನಾಥ್, ಡಿ. 15ರಂದು ತಾವು ಕರ್ತವ್ಯದಲ್ಲಿದ್ದಾಗ ರಾಜಕೀಯ ಮುಖಂಡ ಜಯರಾಜ್ ಮತ್ತು ಅವರ ಸಂಗಡಿಗರು ಆಸ್ಪತ್ರೆಗೆ ಬಂದು ತಾವು ಇತ್ತೀಚೆಗೆ ದಾಳಿ ಮಾಡಿದ್ದ ಸುಜಾತ ಕ್ಲಿನಿಕ್ ಕೇಸಿನ ವಿಷಯವಾಗಿ ಮಾತನಾಡಿದರು. ಅಲ್ಲಿ ಸೀಜ್ ಮಾಡಿದ್ದ ವಸ್ತುಗಳನ್ನು ವಾಪಸ್ ಕೊಡುವಂತೆ ತಮ್ಮ ಮೇಲೆ ಒತ್ತಡ ಹಾಕಿದರು. ಮತ್ತು ಅವಾಷ್ಯ ಶಬ್ದಗಳಿಂದ ತಮ್ಮನ್ನು ನಿಂದಿಸಿದರು ಎಂದು ಹೇಳಿದರು.

ADVERTISEMENT

ತಾವು ಈ ವಿಷಯವಾಗಿ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಾಗ ಅಲ್ಲಿಗೂ ಆಗಮಿಸಿದ ಅವರ ಬೆಂಬಲಿಗರು ತಮ್ಮನ್ನು ನಿಂದಿಸಿದರು. ತಮಗೆ ಪ್ರಾಣ ಬೆದರಿಕೆ ಹಾಕಿದರು ಅದರಿಂದ ಭಯಭೀತನಾಗಿ ಮನೆಯವರಿಗೂ ತಿಳಿಸದೆ ತಾವು ಒಬ್ಬರೇ ಕಾರಿನಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿದೆ. ಒತ್ತಡದಿಂದ ಪಾರಾಗಲು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೆ ಎಂದು ತಿಳಿಸಿದರು.

ಗುರುವಾರ ರಾತ್ರಿ ಟಿ.ವಿಯಲ್ಲಿ ತಮ್ಮ ಸಿಬ್ಬಂದಿ ತಮಗಾಗಿ ಅಳುತ್ತಿರುವುದನ್ನು ಕಂಡು ಬೇಸರವಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಿ ವಾಪಸ್ ಬಂದಿರುವುದಾಗಿ ತಿಳಿಸಿದರು.

ತಮಗೆ ಈಗಲೂ ಪ್ರಾಣ ಬೆದರಿಕೆಯಿದೆ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಪೊಲೀಸರು ಸೂಕ್ತ ಭದ್ರತೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಹೇಳಿದರು.

ಮಂಜುನಾಥ್ ಅವರ ಶೋಧಕ್ಕಾಗಿ ಡಿವೈಎಸ್‌ಪಿ ನೇತೃತ್ವದಡಿ 15 ತಂಡಗಳನ್ನು ರಚಿಸಿ ರಾಜ್ಯದಾದ್ಯಂತ ತನಿಖೆ ಕೈಗೊಳ್ಳಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್‌ ತಿಳಿಸಿದರು.

ಬೆಳಿಗ್ಗೆ ಹಾಸನದ ಬಳಿಯ ಹಿರೇಸಾವೆಯಲ್ಲಿ ಮಂಜುನಾಥ್ ಪತ್ತೆಯಾದರು. ಮಧ್ಯಾಹ್ನವೇ ಪೊಲೀಸ್ ಠಾಣೆಗೆ ಆಗಮಿಸಿದ ಮಂಜುನಾಥ್, ಇತರೆ ಅಧಿಕಾರಿಗಳು ಮತ್ತು ಪೊಲೀಸರ ಜೊತೆಗೆ ಮಾತುಕತೆ ನಡೆಯಿತು. ಕೊನೆಯಲ್ಲಿ ಮಂಜುನಾಥ್ ನೀಡಿದ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.