ADVERTISEMENT

ಅಂಗವಿಕಲರು ಶಾಪಗ್ರಸ್ತರಲ್ಲ: ಹೆಗ್ಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 8:50 IST
Last Updated 22 ಸೆಪ್ಟೆಂಬರ್ 2011, 8:50 IST

ಧಾರವಾಡ: `ಭಗವಂತನ ಸೃಷ್ಟಿಯಲ್ಲಿ ಅಂಗವೈಕಲ್ಯಕ್ಕೆ ಒಳಗಾಗುವುದು ಸಹಜ. ಕೆಲವರಿಗೆ ಹುಟ್ಟಿನಿಂದಲೇ ಅಂಗವೈಕಲ್ಯ ವಿದ್ದರೆ, ಕೆಲವರಿಗೆ ಜೀವನದ ಹಲವಾರು ಘಟ್ಟಗಳಲ್ಲಿ ಅಂಗವಿಕಲತೆ ಉಂಟಾಗಬಹುದು. ಆದರೆ ಅಂಗವಿಕಲತೆ ಎನ್ನುವುದು ಶಾಪಗ್ರಸ್ಥತೆ ಅಲ್ಲ~ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಇಲ್ಲಿನ ಜೆಎಸ್‌ಎಸ್ ಕಾಲೇಜಿನ ಉತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ನ.ವಜ್ರಕುಮಾರ ಅಭಿನಂದನ ಪುರಸ್ಕಾರ ಪ್ರಶಸ್ತಿಯನ್ನು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಪ್ರದಾನ ಮಾಡಿ ಮಾತನಾಡಿದ ಅವರು, ಅಂಗವಿಕಲರಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ.
 
ಹೊರಗಿನ ದೃಷ್ಟಿಗಿಂತ ಅವರ ಅಂತರಂಗದ ದೃಷ್ಟಿ ಹೆಚ್ಚು ಜಾಗೃತವಾಗಿರುತ್ತದೆ. ಅವರಲ್ಲಿ ಏಕಾಗ್ರತೆ ಅಧಿಕವಾಗಿರುತ್ತದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಅಂಗವಿಕಲರ ಸ್ಥಿತಿ ಚಿಂತಾಜನಕ ವಾಗಿರುತ್ತದೆ. ಬಹಳ ಹೀನಾಯ ಸ್ಥಿತಿಯಲ್ಲಿ ನಿಕೃಷ್ಟಭಾವ ದಿಂದ ಅವರನ್ನು ಕಾಣಲಾಗುತ್ತದೆ.
 
ಅಂಗವಿಕಲರನ್ನು ಸಾಕು ವುದೇ ಕಷ್ಟದಾಯಕ ಎಂಬ ಭಾವನೆ ಇದೆ. ಇವತ್ತು ಆಧುನಿಕ ತಂತ್ರಜ್ಞಾನದ ವಾಹಿನಿಗೆ ಅಂಗವಿಕಲರನ್ನು ತರುವ ಪ್ರಯತ್ನ ಆಗಬೇಕಾಗಿದೆ. ವಿದೇಶಗಳಲ್ಲಿ ಅಂಗವಿಕಲರಿಗಾಗಿಯೇ ಪ್ರತ್ಯೇಕ ಸಂಚಾರ, ಶೌಚಾಲಯದ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯಗಳು ಕಡ್ಡಾಯವಾಗಿರುವುದನ್ನು ಕಾಣಬಹುದು.

ನಮ್ಮಲ್ಲಿಯೂ ಆ ರೀತಿಯ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದು ಹೇಳಿದರು. ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಮಹಾಂತೇಶ ಜಿ.ಕಿವಡಸಣ್ಣವರ ಪ್ರಶಸ್ತಿ ಸ್ವೀಕರಿಸಿ, ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಆದ ಆನಂದಕ್ಕಿಂತ ಮಿಗಿಲಾದ ಸಂತೋಷ ಈ ಪ್ರಶಸ್ತಿಯಿಂದ ಆಗಿದೆ ಎಂದು ಹೇಳಿದರು.

ಹೆಗ್ಗಡೆ ಯವರ ಆಶೀರ್ವಾದದ ರೂಪದಲ್ಲಿ ಈ ಪ್ರಶಸ್ತಿ ಪಡೆದಿರುವುದು ನನ್ನ ಸೌಭಾಗ್ಯ. ಇದು ತಮ್ಮ ಕೆಲಸದ ಜವಾ ಬ್ದಾರಿಯನ್ನು ಹೆಚ್ಚಿಸಿದೆ ಎಂದ ಅವರು, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಹೆಗ್ಗಡೆ ಅವರಿಂದ 5 ಲಕ್ಷ ರೂ. ಆಶೀರ್ವಾದ ಬಂದಿದೆ. ತಮ್ಮ ಸಂಸ್ಥೆಯ ಮೇಲೆ ಮಂಜುನಾಥಸ್ವಾಮಿಯ ಹಾಗೂ ಹೆಗ್ಗಡೆಯವರ ಆಶೀರ್ವಾದ ಸದಾಕಾಲವಿರಲಿ ಎಂದು ಬಯಸಿದರು.

ಪುರಸ್ಕಾರ ಸಮಿತಿ ಸಂಯೋಜನ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಸ್ವಾಗತಿಸಿ, ಕಳೆದ 11 ವರ್ಷಗಳಿಂದ ನಿರಂತರ ವಾಗಿ ಸಾಗಿ ಬಂದಿರುವ ಈ ಪ್ರಶಸ್ತಿ ಪುರಸ್ಕಾರವು ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಗಳಿಗೆ ಅಥವಾ ಸಂಸ್ಥೆಗಳಿಗೆ ನೀಡುತ್ತ ಬರಲಾಗಿದೆ. ಪ್ರಶಸ್ತಿಯು 25,000 ರೂ. ನಗದು, ಪರ್ಯಾಯ ಫಲಕ ಒಳಗೊಂಡಿದೆ ಎಂದರು.

ಡಾ. ನ.ವಜ್ರಕುಮಾರ, ಸುಮನ್ ವಜ್ರಕುಮಾರ, ಡಾ. ಸುಭಾಸ ಜೋಶಿ ವೇದಿಕೆಯಲ್ಲಿದ್ದರು. ಜೆ.ಕೆ.ಶೆಟ್ಟಿ ಪ್ರಶಸ್ತಿ ಪತ್ರ ಓದಿದರು. ಪಾರ್ಶ್ವನಾಥ ಶೆಟ್ಟಿ ವಂದಿಸಿದರು. ಡಾ. ಜಿನ ದತ್ತ ಹಡಗಲಿ ನಿರೂಪಿಸಿದರು. ನಂತರ ಸಮರ್ಥನಂ ಸಂಸ್ಥೆಯ ವಿಕಲಚೇತನ ಮಕ್ಕಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.