ADVERTISEMENT

ಉತ್ತರಿಸಲು ತಡಕಾಡಿದ ಯೋಗೇಶಗೌಡ

ಕೆಜೆಪಿಯ ಅಷ್ಟಗಿ ಬೆಂಬಲಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:06 IST
Last Updated 23 ಏಪ್ರಿಲ್ 2013, 9:06 IST

ಧಾರವಾಡ: ಕರ್ನಾಟಕ ಜನತಾ ಪಕ್ಷದ ಧಾರವಾಡ ಕ್ಷೇತ್ರದ ಅಭ್ಯರ್ಥಿ ತವನಪ್ಪ ಅಷ್ಟಗಿ ಅವರ ಚುನಾವಣಾ ತಂತ್ರಗಾರಿಕೆ ಫಲಿಸಿದ್ದು, ಬಂಡಾಯ ಅಭ್ಯರ್ಥಿಯಾಗಿದ್ದ ನಿಜನಗೌಡ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಷ್ಟಗಿ ಅವರನ್ನು ಬೆಂಬಲಿಸಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಯೋಗೇಶಗೌಡ ಗೌಡರ ಅವರೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಸೋಮವಾರ ಘೋಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೌಡರ ಈ ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಅವರು ಹಲವು ಗೊಂದಲಕಾರಿ ಹೇಳಿಕೆಗಳನ್ನು ನೀಡಿದರಲ್ಲದೇ, ಪಕ್ಷದ ರಾಜ್ಯ ನಾಯಕರಿಂದ `ಸೂಕ್ತ' ಬೆಂಬಲ ಸಿಕ್ಕಿಲ್ಲ. ರೈತರು, ಕಾರ್ಮಿಕರು, ಬಡವರ ಪರ ಕೆಲಸ ಮಾಡದ ದುಷ್ಟರನ್ನು ಸೋಲಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು.

`ಪಕ್ಷೇತರ ಆಗಿದ್ದರೆ ಈ ನಿರ್ಧಾರ ಕೈಗೊಳ್ಳಬಹುದಾಗಿತ್ತು. ಒಂದು ಪಕ್ಷದಿಂದ ಸ್ಪರ್ಧಿಸಿ ಹೀಗೆ ಮಾಡುವುದು ಆ ಪಕ್ಷಕ್ಕೆ ದ್ರೋಹ ಮಾಡಿದಂತಾಗುವುದಿಲ್ಲವೇ' ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಯಾವುದೇ  ಉತ್ತರ ನೀಡದ ಗೌಡರ, ಕೆಟ್ಟವರನ್ನು ಸೋಲಿಸಿ ಕ್ಷೇತ್ರದ ಬಡವರ ಉದ್ಧಾರ ಮಾಡಲು ಹೀಗೆ ಮಾಡಿದ್ದಾಗಿ ತಿಳಿಸಿದರು.

ಸಂಜೆ 4ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದರೂ ಅರ್ಧ ಗಂಟೆ ತಡವಾಗಿ ಗೋಷ್ಠಿ ಆರಂಭವಾಯಿತು. ಯೋಗೇಶಗೌಡ ಅವರು ಸಭಾಂಗಣದ ಹೊರಗೆ ನಿಂತೇ ಬೆಂಬಲ ನೀಡಬೇಕೇ ಬೇಡವೇ ಎಂಬ ಬಗ್ಗೆಯೇ ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ್ದರು. ಅಷ್ಟಗಿ ಅವರಲ್ಲಿಗೇ ಹೋಗಿ ಮನವೊಲಿಸಿ ಗೋಷ್ಠಿಗೆ ಕರೆತಂದರು.

ಕೆಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕೆ ಪ್ರತಿಯಾಗಿ ಜಿ.ಪಂ. ಚುನಾವಣೆಯಲ್ಲಿ ಗೌಡರಗೆ ಟಿಕೆಟ್ ನೀಡುವ ಭರವಸೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ ಈ ಮಾತನ್ನು ಒಪ್ಪದ ಯೋಗೇಶಗೌಡ, `ಕೆಜೆಪಿ ಬೆಂಬಲಿಸಿದ್ದಕ್ಕೆ ಯಾವುದೇ ಭರವಸೆ ಅಥವಾ ಪ್ರತಿಫಲ ಪಡೆದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.