ADVERTISEMENT

ಜಲಸಂಪನ್ಮೂಲ ಸದ್ಬಳಕೆಗೆ ವಿಫಲ: ವಿಷಾದ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 8:20 IST
Last Updated 23 ಜುಲೈ 2012, 8:20 IST

ಕಲಘಟಗಿ: ತಾಲ್ಲೂಕಿನ ಜಲಸಂಪನ್ಮೂಲದ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಈ ವರೆಗೆ ಗಂಭೀರವಾಗಿ ಚಂತನೆ ಮಾಡದಿರುವುದ ರೈತರ ದುರಾದೃಷ್ಟ ಎಂದು ಕ್ರೆಡಲ್ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ವಿಷಾದಿಸಿದರು.

ಅವರು ಭಾನುವಾರ ತಾಲ್ಲೂಕಿನ ಬೇಗೂರ ಗ್ರಾಮದಲ್ಲಿ ಜರುಗಿದ ಮಿಶ್ರಿಕೋಟಿ ಜಿ.ಪಂ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕಿನಲ್ಲಿ ಶಾಲ್ಮಲಾ ಹಾಗೂ ಬೆಡ್ತಿ ನದಿಗಳು ಹರಿದಿದ್ದರೂ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿ ನೀರು ಹರಿಸುವಲ್ಲಿ ಕ್ಷೇತ್ರ ಪ್ರತಿನಿಧಿಸಿದ ಎಲ್ಲ ಶಾಸಕರು ವಿಫಲರಾಗಿದ್ದಾರೆ. ಇದಕ್ಕೆ ಹೊರತಾಗಿ ಮಹಾನಗರಗಳಿಗೆ ಕುಡಿಯುವ ನೀರು ಪೂರೈಸುವ ನೀರಸಾಗರ ಮತ್ತು ದೊಡ್ಡ ಕೆರೆ ಎಂದೇ ಗುರುತಿಸಿಕೊಂಡಿರುವ ಸೋಮನಕೊಪ್ಪ ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಇದ್ದುದರಿಂದ ರೈತರು ನಿರಂತರವಾಗಿ ಬಡತನದಿಂದ ಪರಿತಪಿಸುವಂತಾಗಿದೆ ಎಂದು ಹೇಳಿದರು.

ಇಲ್ಲಿನ ಸಮಗ್ರ ಅರಣ್ಯ ಸಂಪತ್ತು ಅವ್ಯಾಹತವಾಗಿ ಲೂಟಿಯಾಗುತ್ತಿದೆ. ಇದನ್ನು ತಡೆಗಟ್ಟಿ ಸಂರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಕ್ಷೇತ್ರವು ಪರಕೀಯರ ಆಳ್ವಿಕೆಯಿಂದ ಅಭಿವೃದ್ಧಿ ವಂಚಿತವಾಗಿದ್ದು, ಪ್ರಗತಿಪರ ಯೋಜನೆಗಳನ್ನು ತಾಲ್ಲೂಕಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ಥಳೀಯ ನಾಯಕತ್ವದ ಅವಶ್ಯಕತೆ ಇದೆ ಎಂದು ಹೇಳಿದರು.

ADVERTISEMENT

ಜಿ.ಪಂ. ಮಾಜಿ ಸದಸ್ಯ ಐ.ಸಿ. ಗೋಕುಲ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ವೈ.ಬಿ. ದಾಸನಕೊಪ್ಪ, ಬಸವರಾಜ ಕರಡಿಕೊಪ್ಪ, ಶಂಕ್ರಣ್ಣ ಅಗಡಿ, ತಾ.ಪಂ. ಅಧ್ಯಕ್ಷ ಶೇಖಣ್ಣ ಹುಲಗೂರ, ಉಪಾಧ್ಯಕ್ಷೆ ಸಾವಕ್ಕ ಪಾಟೀಲ, ಸದಸ್ಯರಾದ ಗೀತಾ ರಜಪೂತ, ಯಲ್ಲಾರಿ ಶಿಂಧೆ, ಬಸವಣ್ಣಯ್ಯ ಹಿರೇಮಠ, ಸಿ.ಸಿ. ಕೊಪ್ಪದಗಾಣಿಗೇರ, ನಿರ್ಮಲಾ ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸದಾನಂದ ಚಿಂತಾಮಣಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ನೂಲ್ವಿ, ಜಿಲ್ಲಾ ಮಹಿಳಾ ಮೋರ್ಚಾ ಘಟಕದ ಪ್ರಧಾನ ಕಾರ್ಯದರ್ಶಿ ವೀಣಾ ಕುಲಕರ್ಣಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷೆ ಗೀತಾ ಮರಲಿಂಗಣ್ಣವರ, ಜಿ.ಪಂ. ಮಾಜಿ ಸದಸ್ಯೆ ಮಾಲಾ ಗೋಕುಲ, ಶಂಕರ ಬಸವರೆಡ್ಡಿ, ಗುಂಡಗೋವಿ, ಎನ್.ಬಿ. ಕುಬಿಹಾಳ, ನಾಗಪ್ಪ ಛಬ್ಬಿ, ಯಲ್ಲಪ್ಪ ಕುಂದಗೋಳ, ಶಿವಲಿಂಗಪ್ಪ ಮಡಿವಾಳರ, ಸಿ,ಬಿ. ಪಾಟೀಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.