ಧಾರವಾಡ: ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಜನರು ರಸ್ತೆ, ಸ್ವಚ್ಛತೆ, ಚರಂಡಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರದ ನಿರೀಕ್ಷೆ ಹೊಂದಿದ್ದಾರೆ. ನಿರೀಕ್ಷೆಗಳ ಕುರಿತು ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ಕೆಳಗಿನಂತಿವೆ.
ಕಾಮಗಾರಿ ಪೂರ್ಣಗೊಳ್ಳಲಿ
ಆಮೆಗತಿಯಲ್ಲಿ ಸಾಗಿರುವ ಬಿಆರ್ಟಿಎಸ್ ಯೋಜನೆಯನ್ನು ಮೊದಲು ಪೂರ್ಣಗೊಳಿಸಲಿ. ಈ ಯೋಜನೆಯ ವಿಳಂಬದಿಂದ ಜನತೆ ಬೇಸತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಆದಷ್ಟು ಶೀಘ್ರವೇ ಕಾಮಗಾರಿ ಪೂರ್ಣ ಗೊಳಿಸಬೇಕು. ಉತ್ತಮ ರಸ್ತೆಗಳ ನಿರ್ಮಾಣ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು
– ವಿನೋದಕುಮಾರ ಶೆಟ್ಟಿ, ಮೆಹಬೂಬ್ನಗರ
ತ್ಯಾಜ್ಯ ಸಮಸ್ಯೆ ಬಗೆಹರಿಯಲಿ
ಹಲವಾರು ವರ್ಷಗಳಿಂದ ಜಯನಗರದಲ್ಲಿ ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ. ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಕಂಟೆನರ್ಗಳನ್ನು ಇಡದಿರುವುದರಿಂದ ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ರಸ್ತೆಗಳಲ್ಲಿ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಅರವಿಂದ ಬೆಲ್ಲದ ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಸ್ತೆಗಳ ನಿರ್ಮಾಣ ಮಾಡಬೇಕು. ಸುರಕ್ಷತೆ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು
– ಎಂ.ಎನ್. ಪ್ರಸನ್ನ, ಜಯನಗರ
ಸುರಕ್ಷತೆ ಆದ್ಯತೆ ಆಗಲಿ
ಮಹಾಂತನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಚರಂಡಿ ವ್ಯವಸ್ಥೆ ಸರಿ ಪಡಿಸಬೇಕು. ಜನರ ಸಮಸ್ಯೆಗಳಿಗೆ ಹೊಸ ಶಾಸಕರು ಸ್ಪಂದಿಸಬೇಕು
– ಸತೀಶ ಮುಕಾಶಿ, ಮಹಾಂತನಗರ
ಸ್ವಚ್ಛತೆಗೆ ಒತ್ತು ಕೊಡಿ
ಅಪೂರ್ಣಗೊಂಡ ಕಾಂಕ್ರೀಟ್ ರಸ್ತೆ ಪೂರ್ಣ ಗೊಳಿಸಬೇಕು. ಸಾರಸ್ವತಪುರದಲ್ಲಿ ವಿದ್ಯುತ್ ದೀಪದ ಕೊರತೆ ಇದೆ. ಶೀಘ್ರದಲ್ಲಿ ದೀಪಗಳನ್ನು ಅಳವಡಿಸಿ, ಆಗುತ್ತಿರುವ ಸರಗಳ್ಳತನ ಇತ್ಯಾದಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಸ್ವಚ್ಛತೆ ಬಡಾವಣೆಯಲ್ಲಿ ಮರೀಚಿಕೆಯಾಗಿದೆ. ಅದಕ್ಕೆ ಆದ್ಯತೆ ನೀಡಬೇಕು
-ಆರ್.ವಿ.ಶಿಗ್ಗಾಂವ್, ಸಾರಸ್ವತ ಪುರ
ರಸ್ತೆ ಸರಿ ಮಾಡಿಸಲಿ
ಭಾರತಿ ನಗರದಲ್ಲಿ 24x7 ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕಾಮಗಾರಿಗಾಗಿ ರಸ್ತೆಗಳನ್ನು ಪದೇ ಪದೇ ಅಗೆಯ ಲಾಗುತ್ತಿದೆ. ಒಮ್ಮೆ ರಸ್ತೆ ಅಗೆದರೆ, ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳುವಂತೆ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಲು ಸೂಚಿಸಬೇಕು. ಕ್ಷೇತ್ರದ ಒಳಚರಂಡಿ ಸರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಉತ್ತಮ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ
- ಸಂಜಯ ಶಿರಹಟ್ಟಿ, ಭಾರತಿನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.